Tuesday 19 April 2011

ಕ್ಷಯ ರೋಗದ ಬಗ್ಗೆ ನಿಮಗೆಷ್ಟು ತಿಳಿದಿದೆ?

  
'ಕ್ಷಯ' ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊ 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.
ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ.
ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು- ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ.
ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು.
ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ. ಆದ್ದರಿಂದ ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಬೇಕು. ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಕಫ ಪರೀಕ್ಷೆ, ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ.
ರಿಫಾಂಪಿಸಿಸ್, ಇತ್ಯಾಂಬ್ಯುಟಾಲ್ ಮತ್ತು ಐಸೊನೆಕ್ಸ್‌ಗಳಂತಹ ಔಷಧಗಳಿಂದ ಈ ರೋಗ ವಾಸಿಯಾಗುತ್ತದೆ. ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು, ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು. ರೋಗ ವಾಸಿಯಾಗದೇ ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ್ದರೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕೆಮ್ಮುವ ಸಂದರ್ಭದಲ್ಲಿ ಇತರರಿಗೆ ಹರಡದಂತೆ ಕರವಸ್ತ್ರ ಉಪಯೋಗಿಸಬೇಕು. ಹಾಗೆಯೇ ಪರಿಸರ, ಸ್ವಚ್ಛ ಗಾಳಿಯ ಬಗ್ಗೆಯೂ ಜಾಗರೂಕತೆ ವಹಿಸಬೇಕು. ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ.
                                                                                                                  *ನಾಗರಾಜ್ ಬೇಳ

No comments:

Post a Comment