Tuesday 19 April 2011

ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ


ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು ಎಂದು ಹಲವು ಸಂಶೋಧನೆಗಳು ಹೇಳಿವೆ.
ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ (Ocimum tenuiflorum) ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ. ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆಯೆಂಬ ನಂಬಿಕೆ ಮಾತ್ರವಲ್ಲ, ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತಯೆಂಬ ನಂಬಿಕೆಯೂ ಬೆಳೆದು ಬಂದಿದೆ.
ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ. ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ.
ಈ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ.
ದೇವಸ್ಥಾನ, ಯಾತ್ರಾಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ. ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ.
ಹಂದಿಜ್ವರಕ್ಕೂ ರಾಮಬಾಣ...
ಆಯುರ್ವೇದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ. ಇದರಲ್ಲಿರುವ ಔಷಧೀಯ ಗುಣಗಳು ಎಚ್‌1ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ.
ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಪಡಿಸುತ್ತದೆ. ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.
ತುಳಸಿ ಎಲೆಗಳು ಹಂದಿಜ್ವರ ಬರದಂತೆ ತಡೆಗಟ್ಟುತ್ತದೆ. ಹಾಗೆಯೇ ರೋಗ ಪೀಡಿತರಾದವರು ಶೀಘ್ರದಲ್ಲೇ ಗುಣಮುಖವಾಗಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7ರಿಂದ 8 ತುಲಸಿ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ.
ದಿನನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸಬಹುದು.
ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ. ಮನೆ ಪರಿಸರದಲ್ಲಿ ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸಬಹುದು. ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ ಸೇವನೆ ಉತ್ತಮ.

                                                                  *ನಾಗರಾಜ್ ಬೇಳ

ಪ್ರತಿ ಮನೆಯ ಅತಿಥಿ ಆಗಿರುವ ಶೀತ, ನೆಗಡಿ

ಮಳೆಗಾಲ ಅಥವಾ ಚಳಿಗಾಲವೇ ಆಗಲಿ, ಕೆಮ್ಮು ಹಾಗೂ ಶೀತ ಸಾಮಾನ್ಯ. ಆದರೆ ಇದು ಕೇವಲ ತಂಪಾದ ಹವೆದಿಂದ ಮಾತ್ರ ಬರುವುದಿಲ್ಲ. ಅಲರ್ಜಿ, ಕೆಲವೊಂದು ಪರಿಸ್ಥಿತಿಗಳಲ್ಲಿ ಜನರೊಂದಿಗೆ ಹೆಚ್ಚು ಬೆರೆಯುವುದರಿಂದಲೂ ನೆಗಡಿ ಉಂಟಾಗುತ್ತದೆ. ಇದರ ಕಿರಿಕಿರಿ ಮಾತ್ರ ಹೇಳತೀರದು.
ಪ್ರತಿ ಮನೆಯ ಅಪರೂಪವಲ್ಲದ ಈ ಅತಿಥಿಯು ಇತರರಿಗೆ ಹರಡಲು ಹೆಚ್ಚು ಕಷ್ಟಪಡಬೇಕಿಲ್ಲ. ಮೂಗನ್ನು ಕೈಯಿಂದ ಸೀದ ನಂತರ ಆ ವ್ಯಕ್ತಿಯು ಅದೇ ಕೈಯಿಂದ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೂ ವೈರಸ್ ಹರಡಿ ನೆಗಡಿ ಉಂಟಾಗಬಹುದು. ಸಾಮಾನ್ಯವಾಗಿ ಕೆಮ್ಮು ಮತ್ತು ಸೀನುವಿಕೆಯಿಂದಾಗಿ ಮಾತ್ರ ಕೆಮ್ಮು ಹರಡುತ್ತದೆ ಎಂಬುದು ತಪ್ಪು ಭಾವನೆ. ನಾವು ದಿನನಿತ್ಯ ಉಪಯೋಗಿಸುವಂತಹ ವಸ್ತುಗಳಲ್ಲಿರುವ ಹಲವು ವೈರಸ್‌ಗಳಿಂದಲೂ ಇದು ಪಸರಿಸುತ್ತದೆ.
ದಿನನಿತ್ಯ ಬಳಕೆಯಾಗುವ ವಸ್ತುಗಳಲ್ಲಿ ರೋಗಾಣಗಳು ಗಂಟೆಗಟ್ಟಲೆ ಜೀವಂತವಾಗಿರುತ್ತವೆ. ಹಾಗಾಗಿ ಇಂತಹ ವಸ್ತುಗಳಿಂದಲೂ ಸೋಂಕು ಹರಡುತ್ತವೆ. ದೈನಂದಿನ ಜೀವನದಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನು ಸ್ವಚ್ಛವಾಗಿಡಿಲು ಯತ್ನಿಸುವುದು ಈ ನಿಟ್ಟಿನಲ್ಲಿ ಅಗತ್ಯ.

'
ವಿಟಮಿನ್ ಡಿ' ಕೊರತೆ ಶೀತ ಮತ್ತು ನೆಗಡಿ ಬರುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ರೋಗಾಣುಗಳ ವಿರುದ್ಧ ವಿಟಮಿನ್ ಡಿ ಹೋರಾಡುತ್ತಿರುತ್ತದೆ. ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ರೋಗ ನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಇದರಿಂದಾಗಿ ಶೀತ ಮತ್ತು ನೆಗಡಿಯು ಸುಲಭವಾಗಿ ವ್ಯಕ್ತಿಯನ್ನು ಆವರಿಸುತ್ತವೆ.
ನಮ್ಮ ಶರೀರಕ್ಕೆ ವಿಟಮಿನ್ ಡಿ ಪ್ರಮಾಣ ಸೂರ್ಯ ಪ್ರಕಾಶದಿಂದ ಸಿಗುತ್ತದೆ. ಆದರೆ ಚಳಿ ಮತ್ತು ಮಳೆಗಾಲದಲ್ಲಿ ಸೂರ್ಯನ ಬೆಳಕು ಸಿಗದೇ ಇರುವ ಸಂದರ್ಭದಲ್ಲಿ ವಿಟಮಿನ್ ಡಿ ಪ್ರಭಾವವೂ ಕುಂಠಿತವಾಗುತ್ತದೆ. ಇದು ಶೀತ ಮತ್ತು ನೆಗಡಿ ಹೆಚ್ಚಲು ಕಾರಣವಾಗುತ್ತದೆ.
ಇದನ್ನು ತಡೆಗಟ್ಟಲು ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಹಾಲು ಕುಡಿಯುವುದು ಉತ್ತಮ. ಯಾಕೆಂದರೆ ಹಾಲಿನಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗೆಯೇ ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದಲೂ ನೆಗಡಿ ಕಡಿಮೆಯಾಗುತ್ತದೆ.
ಜೇನುತುಪ್ಪದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವ ಮೂಲಕವೂ ಇದರ ನಿವಾರಣೆ ಮಾಡಬಹುದು. ವಿಪರೀತ ಕೆಮ್ಮು ಉಂಟಾದ ಸಂದರ್ಭದಲ್ಲಿ ಅರಿಶಿನ ಪುಡಿಯನ್ನು ಕೆಂಡದ ಮೇಲೆ ಚೆಲ್ಲಿ, ಅದರಿಂದ ಹೊರಡುವ ಹೊಗೆಯನ್ನು ಮೂಗಿನ ಮೂಲಕ ಸೇವಿಸಿಯೂ ಇದರ ಪ್ರಭಾವ ಕಡಿಮೆ ಮಾಡಬಹುದು.
 *ನಾಗರಾಜ್ ಬೇಳ

ಕೂದಲು ಉದುರುವಿಕೆಗೆ ಮಾನಸಿಕ ಒತ್ತಡವೂ ಕಾರಣ

ತಲೆಗೂದಲೆಂದರೆ ಸೌಂದರ್ಯದ ಪ್ರತೀಕ. ಹಾಗೆಂದು ಪ್ರತಿಯೊಬ್ಬರೂ ಪರಿಗಣಿಸಿರುವುದರಿಂದಲೇ ಕೂದಲು ಉದುರುವಿಕೆ ಎನ್ನುವುದು ಇಂದಿನ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದರ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೋದರೆ ಅಲ್ಲಿ ಸಿಗುವ ದೊಡ್ಡ ಮಿಕ ಮಾನಸಿಕ ಒತ್ತಡ.
ಕೂದಲು ಉದುರುವಿಕೆ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವುದು ಇಂದಿನ ಯುವ ಜನತೆ ಮತ್ತು ಕೂದಲು ಉದುರುತ್ತಿರುವುದು ಕೂಡ ಯುವ ಜನತೆಯದ್ದೇ. ಪುರುಷರಿಗಿಂತ ಸ್ತ್ರೀಯರಲ್ಲಿ ಕೂದಲಿನ ಬಗ್ಗೆ ಅತಿಯಾದ ಕಾಳಜಿ ಹೆಚ್ಚಾದರೂ, ಈ ಸಮಸ್ಯೆಯಿಂದ ಹೆಚ್ಚೆಚ್ಚು ಬಾಧೆಗೊಳಗಾಗುತ್ತಿರುವುದು ಪುರುಷರು ಎಂಬುದು ವಾಸ್ತವ. ವಯಸ್ಸು ಇಪ್ಪತ್ತಾಗುತ್ತಿದ್ದಂತೆ ತಲೆಯಲ್ಲಿ ಸೂರ್ಯ-ಚಂದ್ರನ ಮಚ್ಚೆಗಳು ಕಾಣಿಸಿಕೊಳ್ಳುವುದು ಸಹಜವಾಗಿಯೇ ಆತಂಕಕ್ಕೂ ಕಾರಣವಾಗುತ್ತಿದೆ.
ಆದರೆ ಇದಕ್ಕೆ ಆತಂಕವೇ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ಕೆಲವು ಸಂದರ್ಭಗಳಲ್ಲಿ ಕಾರಣವಿಲ್ಲದೆ ಕೂದಲುಗಳು ಉದುರಬಹುದು. ಇಲ್ಲಿ ಮಾನಸಿಕ ಒತ್ತಡ, ಹಾರ್ಮೋನುಗಳ ವ್ಯತ್ಯಾಸ, ಅನಾರೋಗ್ಯದ ಸಂದರ್ಭದಲ್ಲಿ ತೆಗೆದುಕೊಳ್ಳುವ ಔಷಧಿಗಳ ದುಷ್ಪರಿಣಾಮ ಮುಂತಾದ ಹತ್ತು ಹಲವು ಕಾರಣಗಳು ದಿನದಿಂದ ದಿನಕ್ಕೆ ಇದಕ್ಕೆ ಸೇರ್ಪಡೆಯಾಗುತ್ತಾ ಬಂದಿದೆ.
ವೈದ್ಯರ ಪ್ರಕಾರ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆಯಾದಾಗಲೂ ಕೂದಲು ಉದುರುತ್ತದೆ. ಹಾಗಾಗಿ ಕೂದಲು ಕಾಂತಿಯುತವಾಗಿ ಕಾಣಿಸಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರಗಳ ಸೇವನೆಯೂ ಅಗತ್ಯ. ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚೆಚ್ಚು ತರಕಾರಿ ಮತ್ತು ಹಣ್ಣು ಹಂಪಲುಗಳ ಬಳಕೆಯೂ ಹೆಚ್ಚು ಫಲಕಾರಿ.
ಕೆಲವರಲ್ಲಿ ನರಸಂಬಂಧೀ ದುರ್ಬಲತೆ ಇದ್ದಾಗ ಕೂದಲುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೆ ಹಾರ್ಮೋನ್‌ಗಳ ಏರುಪೇರಿನಿಂದಾಗಿಯೂ ಕೂದಲು ಬೇಗನೆ ಬೆಳ್ಳಗಾಗುವ ಲಕ್ಷ್ಮಣಗಳು ಕಂಡುಬರುತ್ತಿವೆ.
ಆದರೆ ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಉದುರುವಿಕೆ ವಯೋಮಾನಕ್ಕೆ ವಿರುದ್ಧವಾಗಿ ಆರಂಭವಾಗುತ್ತದೆ. ಫಂಗಸ್ ಸೋಂಕಿನಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಒಬ್ಬರು ಉಪಯೋಗಿಸಿದ ಬಾಚಣಿಗೆಯನ್ನು ಇನ್ನೊಬ್ಬರು ಉಪಯೋಗಿಸದಿದ್ದರೆ ಒಳಿತು.
ದೀರ್ಘಕಾಲೀನ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲುಗಳ ತಮ್ಮ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದಕ್ಕೆ ಅಧಿಕ ಲವಣಯುಕ್ತ ಆಹಾರಗಳ ಸೇವನೆಯು ಕಾರಣವಾಗುತ್ತದೆ.
ಸರಿಯಾದ ಆರೈಕೆಯಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಕೂದಲ ಉತ್ತಮ ಆರೋಗ್ಯಕ್ಕಾಗಿ ಕೊಬ್ಬರಿ ಎಣ್ಣೆ ಬಳಕೆ ಉತ್ತಮ. ಇದು ಸರಿಯಾದ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅದೇ ರೀತಿ ದಾಸವಾಳ ಗಿಡದ ಎಲೆಗಳನ್ನು ರುಬ್ಬಿ ಅದರಿಂದ ದೊರಕುವ ರಸವನ್ನು ತಲೆಗೆ ಲೇಪಿಸುವುದು ಉತ್ತಮ. ಆ ಮೂಲಕ ಶಾಂಪೂ ಬಳಕೆಯನ್ನು ತಪ್ಪಿಸಬಹುದಲ್ಲದೆ ಇದು ಕೂದಲನ್ನು ನಯವಾಗಿಸುತ್ತದೆ.
ಅಂದ ಹಾಗೆ ಕೂದಲಿಗೆ ಬಣ್ಣ ಹಚ್ಚುವುದು, ಬ್ಲೀಚ್ ಮಾಡುವುದರಿಂದ ಒಂದು ಹಂತದಲ್ಲಿ ಸುಂದರ, ಕಾಂತಿಯುತ ಕೂದಲನ್ನು ಕಾಣಬಹುದಾದರೂ, ನಂತರದ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಗಳೇ ಹೆಚ್ಚು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.
                                                                                                                                     -ನಾಗರಾಜ್ ಬೇಳ

ಕ್ಷಯ ರೋಗದ ಬಗ್ಗೆ ನಿಮಗೆಷ್ಟು ತಿಳಿದಿದೆ?

  
'ಕ್ಷಯ' ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊ 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.
ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ.
ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು- ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ.
ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು.
ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ. ಆದ್ದರಿಂದ ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಬೇಕು. ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಕಫ ಪರೀಕ್ಷೆ, ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ.
ರಿಫಾಂಪಿಸಿಸ್, ಇತ್ಯಾಂಬ್ಯುಟಾಲ್ ಮತ್ತು ಐಸೊನೆಕ್ಸ್‌ಗಳಂತಹ ಔಷಧಗಳಿಂದ ಈ ರೋಗ ವಾಸಿಯಾಗುತ್ತದೆ. ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು, ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು. ರೋಗ ವಾಸಿಯಾಗದೇ ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ್ದರೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕೆಮ್ಮುವ ಸಂದರ್ಭದಲ್ಲಿ ಇತರರಿಗೆ ಹರಡದಂತೆ ಕರವಸ್ತ್ರ ಉಪಯೋಗಿಸಬೇಕು. ಹಾಗೆಯೇ ಪರಿಸರ, ಸ್ವಚ್ಛ ಗಾಳಿಯ ಬಗ್ಗೆಯೂ ಜಾಗರೂಕತೆ ವಹಿಸಬೇಕು. ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ.
                                                                                                                  *ನಾಗರಾಜ್ ಬೇಳ

ಮೂವತ್ತಾಯಿತೇ? ಮಧುಮೇಹ ಪರೀಕ್ಷೆ ಮಾಡಿಸ್ಕೊಳ್ಳಿ...

ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ.
ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ!
ಹಾಗಿದ್ದರೆ, ಮಧುಮೇಹಕ್ಕೆ ಕಾರಣಗಳೇನು? ನಮ್ಮ ಬದಲಾಗಿರುವ ಜೀವನ ಶೈಲಿಯೇ? ಮಾನಸಿಕ ಒತ್ತಡವೇ? ನಮ್ಮ ಜೀನ್‌ಗಳೇ? ಈ ತೊಂದರೆ ಬಾರದಂತೆ, ಬಂದಿದ್ದನ್ನು ನಿಯಂತ್ರಿಸುವಂತೆ ಏನಾದರೂ ಉಪಾಯಗಳಿವೆಯೇ?
ಹೌದು, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿಯಲ್ಲಿ ಮಧುಮೇಹಕ್ಕೆ ಪೂರಕವಾಗುವಂಥವುಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ:
ಕೂತಲ್ಲೇ ಕೆಲಸ...
ಮುಖ್ಯವಾಗಿ, ಇದು ಕುಳಿತು ತಿನ್ನುವ ಕಾಲ. ಅಂದರೆ ಒಂದು ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರೀನೇ. ಬರೇ ಕೈಬೆರಳುಗಳಿಗೆ ಮಾತ್ರವೇ ಒಂದಿಷ್ಟು ವ್ಯಾಯಾಮ ದೊರೆತರೆ ಸಾಕೇ? ದೇಹವೂ ಒಂದಿಷ್ಟು ಅಲುಗಾಡಬೇಡವೇ? ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದು ಬೊಜ್ಜು ಹೆಚ್ಚಿಸಬಹುದು, ಇದರಿಂದ ಡಯಾಬಿಟೀಸ್ ಚಿಗಿತುಕೊಳ್ಳಲೂ ಕಾರಣವಾಗಬಹುದು.
ಒತ್ತಡ...
ಡೆಡ್‌ಲೈನುಗಳನ್ನು ಮೀಟ್ ಮಾಡುವ ಸಾಹಸ, ಮಾರಾಟದಲ್ಲಿ ಇಂತಿಷ್ಟು ಗುರಿ ಸಾಧಿಸಬೇಕೆಂಬ ಒತ್ತಡ, ಇಷ್ಟು ಗಂಟೆಯೊಳಗೆ ಇಷ್ಟು ಕೆಲಸ ಆಗಲೇಬೇಕೆಂಬ ನಿಯಮ... ಇದಲ್ಲದೆ, ಹೊರಗಿನಿಂದಲೂ ಬೆಲೆ ಏರಿಕೆ, ಸಾಂಸಾರಿಕ ಒತ್ತಡಗಳು... ಕಚೇರಿಯಲ್ಲಿಯೂ ನೆಮ್ಮದಿಯಿಲ್ಲ... ಇಂತಹಾ ಪರಿಸ್ಥಿತಿಯು ಮಾನಸಿಕ ಒತ್ತಡಕ್ಕೆ ಕಾರಣವಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಡಯಾಬಿಟೀಸ್ ಹೆಚ್ಚಳಕ್ಕೂ ತನ್ನ ಕೊಡುಗೆ ನೀಡುತ್ತದೆ ಎನ್ನುತ್ತಾರೆ ತಜ್ಞರು.
ಜಂಕ್ ಫುಡ್ ಇಷ್ಟಾನೋ...
ನಗರೀಕರಣ ಹೆಚ್ಚಾದಂತೆ, ಯಾವುದೇ ಪೋಷಕಾಂಶಗಳಿಲ್ಲದ, ಜಂಕ್ ಆಹಾರಕ್ಕೆ ನಾವೆಲ್ಲಾ ಮೊರೆ ಹೋಗುತ್ತಿದ್ದೇವೆ. ನಾರಿನಂಶವಿರುವ ಗೋಧಿಯ ಬದಲು, ಅತ್ಯಲ್ಪ ಕಾರ್ಬೊಹೈಡ್ರೇಟ್ ಇರುವ ಮೈದಾ ಹಿಟ್ಟಿನ ಆಹಾರಕ್ಕೆ, ಪಾಸ್ತಾ, ಪಿಜ್ಜಾ, ನೂಡಲ್... ಏನೇನೋ ಕಂಡು ಕೇಳರಿಯದ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ನಾಲಿಗೆ ಚಪಲ ಬಿಡಬೇಕಲ್ಲ... ಅದೂ ಇರಲಿ, ನಮ್ಮ ಸಾಂಪ್ರದಾಯಿಕ ಆಹಾರಗಳೂ ಇರಲಿ. ಇಲ್ಲವಾದಲ್ಲಿ ಪರಿತಪಿಸಬೇಕಾಗಿರುವುದು ನಾವೇ ಅಲ್ಲವೇ?
ಒಂದು ವರದಿಯ ಪ್ರಕಾರ, ಪಾಶ್ಚಾತ್ಯರಿಗೆ ಹೋಲಿಸಿದರೆ ಮಧುಮೇಹಕ್ಕೆ ತುತ್ತಾಗುವ ಭಾರತೀಯರ ವಯಸ್ಸು ಅವರಿಗಿಂತ ಸುಮಾರು 10-20 ವರ್ಷ ಕಡಿಮೆ. ಅಂದರೆ ಯುವ ಪ್ರಾಯದಲ್ಲೇ ಇದು ಬಾಧಿಸುತ್ತದೆ. ಇದಕ್ಕೆ ಭಾರತೀಯ ಜೀವನ ಶೈಲಿ, ಆಹಾರ ಸೇವನಾ ಪದ್ಧತಿಯೂ ಪ್ರಮುಖ ಕಾರಣ.
ಹಾಗಿದ್ದರೆ ನಾವೇನು ಮಾಡಬಹುದು...
* ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟೀಸ್ ಆರಂಭವಾದಾಗಲೇ ಇದು ಪತ್ತೆಯಾದರೆ, (ಇದನ್ನು ಪ್ರಿ-ಡಯಾಬಿಟಿಸ್ ಅಂತ ಕರೀತಾರೆ) ಅದನ್ನು ಗುಣಪಡಿಸುವುದು ಸುಲಭ. ಆದರೆ ಅದು ಡಯಾಬಿಟಿಸ್ ಹಂತಕ್ಕೆ ತಲುಪಿದರೆ, ಅದನ್ನು ಸಂಪೂರ್ಣ ಕಿತ್ತು ಹಾಕುವ ಮದ್ದಿಲ್ಲ. ಹೀಗಾಗಿ ಬಾರದಂತೆ ತಡೆಯುವುದೇ ನಮ್ಮ ಉದ್ದೇಶವಾಗಿರಬೇಕು.
* ತೂಕದವರಾಗಿದ್ದರೆ, ಆದಷ್ಟು ಬೇಗ ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟೀಸ್‌ನ ರಿಸ್ಕ್ ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ ಮಾಡಿದರೆ ಅತ್ಯುತ್ತಮ. ಸೊಪ್ಪು-ತರಕಾರಿ, ಪೂರಿ, ಮೈದಾದಿಂದ ಮಾಡಿದ ಬ್ರೆಡ್ ಐಟಂ ಮುಂತಾದವುಗಳ ಬದಲು ರೋಟಿ, ಕುಚ್ಚಲಕ್ಕಿಯಂತಹಾ ಪೂರ್ಣಧಾನ್ಯದ ಆಹಾರ ಧಾರಾಳ ಸೇವಿಸಬೇಕು.
* ಬಣ್ಣ ಬಣ್ಣದ ಪೊಟ್ಟಣಗಳಲ್ಲಿ ಬರುವ ಚಿಪ್ಸ್, ಕುಕೀಸ್, ಕೇಕುಗಳು, ಐಸ್ ಕ್ರೀಂಗಳು ಮುಂತಾದವುಗಳನ್ನು ಸಾಧ್ಯವಾದಷ್ಟು ದೂರ ಮಾಡಿ.
* ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ವಾರದ ಐದು ದಿನಗಳಾದರೂ ವ್ಯಾಯಾಮ ಮಾಡಬೇಕು.
* ಸಾಧ್ಯವಿರುವಾಗಲೆಲ್ಲಾ ನಡೆಯಿರಿ, ಮೆಟ್ಟಿಲು ಹತ್ತಿ ತಾರಸಿಗೆ ಹೋಗಿ.
* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಅಥವಾ ಧ್ಯಾನಕ್ಕೆ ಮೊರೆ ಹೋಗಿ.
* ಧೂಮಪಾನ ತ್ಯಜಿಸಿ
* ಮದ್ಯಪಾನದಿಂದ ದೂರವಿರಿ.

ಚಳಿಗಾಲ: ಒಡೆಯುವ ಮುಖದ ಚರ್ಮಕ್ಕೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ, ತುಟಿಯೂ ಒಣಗಿ ರಕ್ತ ಸೋರಿ, ಮುಖದ ಚರ್ಮವೂ ಒರಟಾಗಿ ಏನು ಮಾಡಲಿ ಎಂದು ಅರ್ಥವಾಗುವುದಿಲ್ಲ. ಇದು ಕೇವಲ ಹುಡುಗಿಯರ ಸಮಸ್ಯೆ ಮಾತ್ರವಲ್ಲ. ಹುಡುಗರದ್ದೂ ಕೂಡಾ. ಎಲ್ಲ ವಯಸ್ಸಿನವರಿಗೂ ಚಳಿಗಾಲದಲ್ಲಿ ಚರ್ಮದ ರಕ್ಷಣಯೇ ದೊಡ್ಡ ಸಮಸ್ಯೆ. ಹಾಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿರಲು ವಯಸ್ಸು ಹಾಗೂ ಲಿಂಗಬೇಧವಿಲ್ಲದೆ ಮನೆಯಲ್ಲೇ ಮಾಡಬಹುದಾದ ರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ. ಪ್ರಯತ್ನಿಸಿ ನೋಡಿ.
ಬಾಳೆಹಣ್ಣಿನ ಮಾಸ್ಕ್- ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಬಾಳೆಹಣ್ಣಿನ ಮಾಸ್ಕ್ ಪ್ರಯೋಗಿಸಬಹುದು. ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್ ಮೊಟ್ಟೆಯ ಬಿಳಿಲೋಳೆಯ ಮಾಸ್ಕ್- ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಳಿಗಾಲದಲ್ಲಂತೂ ಇದು ಕಟುವಾದ ಚಳಿಗಾಳಿಗಳಿಂದ ನಿಮ್ಮ ಚರ್ಮಕ್ಕೆ ಸುರಕ್ಷೆ ನೀಡುತ್ತದೆ.
ಹಾಲಿನ ಮಾಸ್ಕ್- ಚಳಿಗಾಲದಲ್ಲಿ ಕಚೇರಿಗೆ ಹೋಗುವ ಮಂದಿಯ ಕಷ್ಟವಂತೂ ಹೇಳತೀರದು. ಹೊರಗಿನ ವಾತಾವರಣದ ಚಳಿಗಾಳಿಗೆ ಮುಖದ ಚರ್ಮ ಬಹುಬೇಗನೆ ಬಿರುಸಾಗುತ್ತದೆ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸರಿಯಾದ ಸಮಯದ ಕೊರತೆಯೂ ಕಾಡುತ್ತದೆ. ಆಧರೆ ಮನೆಯಲ್ಲೇ ಸುಲಭವಾಗಿ ಹೆಚ್ಚು ಸಮಯ ಅಗತ್ಯವಿಲ್ಲದ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಬಹುದು. ಹಾಲಿನ ಮಾಸ್ಕ್ ಕೂಡಾ ಅಂತಹ ಪ್ಯಾಕ್‌ಗಳಲ್ಲೊಂದು. ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. 10. 15 ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್- ಚಳಿಗಾಲದಲ್ಲಿ ಹೆಚ್ಚು ಒಣಚರ್ಮವಾಗಿರುವ ಮಂದಿಗೆ ಸೂಕ್ತ ಮಾಸ್ಕ್ ಎಂದರೆ ಅದು ಬೆಣ್ಣೆಹಣ್ಣಿನ ಮಾಸ್ಕ್. ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯ್ನನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್- ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ಪಪ್ಪಾಯಿ ಫೇಸ್ ಪ್ಯಾಕ್- ಪಪ್ಪಾಯಿ ಹಣ್ಣನ್ನು ಹಿಸುಕಿ ಚೆನ್ನಾಗಿ ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ಚರ್ಮ ನುಣುಪಾಗಿ ಹೊಳೆಯುತ್ತದೆ.
ದ್ರಾಕ್ಷಿ ಮಾಸ್ಕ್- ದ್ರಾಕ್ಷಿ ಹಣ್ಣಿನ ಬೀಜ ತೆಗೆದು ಚೆನ್ನಾಗಿ ಪೇಸ್ಟ್ ಮಾಡಿ. ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ತೊಳೆಯಿರಿ.
ಬಾದಾಮಿ ಎಣ್ಣೆ, ಹಾಲು ಫೇಸ್ ಪ್ಯಾಕ್- ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಬಿಸಿ ಮಾಡದ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ, ಕತ್ತಿಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಿರಿ.
ಕ್ಯಾರೆಟ್- ಜೇನಿನ ಮಾಸ್ಕ್- ಕ್ಯಾರೆಟನ್ನು ತುರಿದು ಪೇಸ್ಟ್ ಮಾಡಿ. ಅದಕ್ಕೆ ಜೇನು ಸೇರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ತೆಂಗಿನ ಹಾಲಿನ ಮಾಸ್ಕ್- ತೆಂಗಿನಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆಯಿರಿ. ಹಾಗೇ ಆ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್- ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ.

ಕೋಳಿ ಮೊಟ್ಟೆ ನಿಮ್ಮ ಸೌಂದರ್ಯಕ್ಕೆ ಟಾನಿಕ್!

ಕೋಳಿಮೊಟ್ಟೆಯೂ ಕೂಡಾ ಚರ್ಮಕ್ಕೆ ಟಾನಿಕ್ ಇದ್ದಂತೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಇದು ಅಕ್ಷರಶಃ ಕೋಳಿಮೊಟ್ಟೆ ಎಣ್ಣೆ ಹಾಗೂ ಮಿಶ್ರ ಚರ್ಮವಿದ್ದವರಿಗೆ ಸೂಕ್ತ ಟಾನಿಕ್. ಮೊಟ್ಟೆಯ ಬಿಳಿಯ ಲೋಳೆ ಹಾಗೂ ಹಳದಿ ಲೋಳೆ ಎರಡೂ ಕೂಡಾ ಚರ್ಮವನ್ನು ನುಣುಪಾಗಿಸುತ್ತದೆ. ಮೊಡವೆ ಹಾಗೂ ಮೊಡವೆಗಳಿಂದಾಗಿರುವ ಕಲೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಹಾಗೂ ಸುಲಭ ಸಾಧನ ಕೂಡಾ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸೌಂದರ್ಯ ಕಾಳಜಿಯಿದು.
ಮೊಟ್ಟೆ ಹಾಗೂ ಜೇನಿನ ಮಾಸ್ಕ್- ಒಂದು ಮೊಟ್ಟೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿ. ಅದಕ್ಕೆ ಆಲಿವ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. 15, 20 ನಿಮಿಷಗಳ ಕಾಲ ಒಣಗಲು ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ನಂತರ ಮತ್ತೆ ತಣ್ಣೀರಿನಿಂದ ಮುಖ ತೊಳೆಯಿರಿ. ಮೊಟ್ಟೆ ಚರ್ಮದ ರಂಧ್ರಗಳನ್ನು ಟೈಟ್ ಮಾಡುವ ಜತೆಗೆ ಚರ್ಮವನ್ನು ಟೋನ್ ಮಾಡುತ್ತದೆ. ಜೇನು ಚರ್ಮವನ್ನು ಮಾಯ್ಸ್‌ಶ್ಚರೈಸ್ ಮಾಡುವ ಗುಣ ಹೊಂದಿದ್ದು, ಮೊಡವೆ ಹಾಗೂ ಕಪ್ಪುಕಲೆಗಳನ್ನೂ ಹೋಗಲಾಡಿಸಲು ಸಹಕರಿಸುತ್ತದೆ.

ಕಣ್ಣಿನ ಕೆಳಭಾಗಕ್ಕೆ ಮೊಟ್ಟೆಯ ಬಿಳಿಲೋಳೆ ಮಾಸ್ಕ್- ಇದು ಶಾಶ್ವತ ಪರಿಹಾರ ಅಲ್ಲದಿದ್ದರೂ ತಾತ್ಕಾಲಿಕವಾಗಿ ಉತ್ತಮ ಪರಿಹಾರ. ಕಣ್ಣಿನ ಕೆಳಗೆ ಕಪ್ಪು ವರ್ತುಲದಿಂದ ಬಳಲುತ್ತಿರುವವರು ಹೊರಗೆ ಹೋಗುವ ಸಂದರ್ಭ ತಾತ್ಕಾಲಿಕವಾಗಿ ಮೊಟ್ಟೆಯ ಬಿಳಿ ಲೋಳೆಯ ಮೂಲಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೊರಗೆ ಹೋಗುವ ಮೊದಲು ಮೊಟ್ಟೆಯ ಬಿಳಿಲೋಳೆಯನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. ಸ್ವಲ್ಪ ಒಣಗಿನ ಮೇಲೆ ಇನ್ನೊಂದು ಕೋಟ್ ಹಚ್ಚಿ. ನಂತರ ಒಣಗಿದ ಮೇಲೆ ತೊಳೆಯದೆ ಅದರ ಮೇಲೆಯೇ ಮೇಕಪ್ ಮಾಡಿ. ಇದು ತುಂಬ ಹೊತ್ತು ಇರುವುದರಿಂದ ಕೆಲವು ಗಂಟೆಗಳ ಕಾಲ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಕಾಣುವುದಿಲ್ಲ.
ಮೊಟ್ಟೆಯ ಹೇರ್ ಕಂಡೀಷನರ್- ಎಣ್ಣೆಯುಕ್ತ ಕೂದಲಿನವರಿಗೆ ಇದೊಂದು ಅತ್ಯುತ್ತಮ ಟಾನಿಕ್. ಒಂದು ಮೊಟ್ಟೆಯನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಹಾಕಿ ಮತ್ತೆ ಬೀಟ್ ಮಾಡಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ತೊಳೆಯಿರಿ. ಮೊಟ್ಟೆಯನ್ನು ಬೇಯಿಸಿ ಬಳಸಬೇಡಿ.

ಮೊಟ್ಟೆ ಹಾಗೂ ಬಾಳೆಹಣ್ಣಿನ ಪ್ರೋಟೀನ್ ಮಾಸ್ಕ್- ನಾಲ್ಕು ಚಮಚ ಕಾಬೂಲಿ ಚೆನ್ನಾ (ದೊಡ್ಡ ಕಡಲೆಕಾಳು) ಪುಡಿಯನ್ನು ಒಂದು ಬಾಳೆಹಣ್ಣಿನ ಜತೆ ಸೇರಿಸಿ ಪೇಸ್ಟ್ ಮಾಡಿ. ಒಂದು ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ತೊಳೆಯಿರಿ. ಇದು ಮುಖದಲ್ಲಿರುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕುವ ಜತೆಗೆ ಮುಖದ ರಂಧ್ರಗಳನ್ನು ಟೈಟ್ ಮಾಡುತ್ತದೆ.

ಮೊಟ್ಟೆ ಹಾಗೂ ಓಟ್‌ಮೀಲ್‌ನ ಮೊಡವೆ ಟ್ರೀಟ್‌ಮೆಂಟ್- ಒಂದು ಮೊಟ್ಟೆಯ ಬಿಳಿಲೋಳೆಯನ್ನು ತೆಗೆದು ಅದಕ್ಕೆ ಒಟ್‌ಮೀಲ್ ಪೌಡರ್ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ಉಗುರುಬಿಸಿ ನೀರಿನ್ಲಲಿ ತೊಳೆದು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಮೊಡವೆಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ.

ನಿಮ್ಮ ಸೌಂದರ್ಯ ದೇಹದ ಆಕಾರದಲ್ಲೂ ಅಡಗಿದೆ!

ಸೌಂದರ್ಯ ಕೇವಲ ಮುಖದಲ್ಲಿ ಮಾತ್ರ ಅಡಗಿದೆಯೇ? ಖಂಡಿತಾ ಅಲ್ಲ. ಬಾಹ್ಯ ಸೌಂದರ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ದೇಹದ ಆಕಾರ. ದಪ್ಪ ಶರೀರ ಸೌಂದರ್ಯವನ್ನು ಹಾಳು ಮಾಡುತ್ತದಷ್ಟೇ ಅಲ್ಲ, ಆರೋಗ್ಯವನ್ನೂ ಕೂಡಾ. ಹಾಗಾಗಿ ತೆಳ್ಳಗಾಗಲು ಮೊದಲು ಸಿದ್ಧರಾಗಿ.
ತೆಳ್ಳಗಾಗೋದು ಎಂದರೆ ಏನನ್ನೂ ತಿನ್ನದೆ ಉಪವಾಸ ಮಾಡುವುದಂತೂ ಖಂಡಿತ ಅಲ್ಲ. ದೇಹಕ್ಕೆ ಹಿತಮಿತವಾಗಿ ಕೊಬ್ಬೂ ಸೇರಿದಂತೆ ವಿಟಮಿನ್, ಕಾರ್ಬೋಹೈಡ್ರೇಟ್ ಎಲ್ಲವೂ ಬೇಕು. ಆದರೆ ಒಂದು ಮಿತಿಯನ್ನು ಇವು ದಾಟಿದರೆ ಬೊಜ್ಜು ಬರಲು ಶುರುವಾಗುತ್ತದೆ. ಆರೋಗ್ಯ, ಸೌಂದರ್ಯ, ನೆಮ್ಮದಿ ಎಲ್ಲವೂ ಹಾಳು. ದುಡ್ಡೂ ದಂಡ.ಹಾಗಾದರೆ ತೆಳ್ಳಗಾಗಬೇಕೆಂದರೆ ಏನು ಮಾಡಬೇಕು? ಈ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಆಯುರ್ವೇದದಲ್ಲಿ ತೆಳ್ಳಗಾಗಲು ಸಾಕಷ್ಟು ಸಿದ್ಧ ಸೂತ್ರಗಳಿವೆ. ಚರಕ ಸಂಹಿತ, ದೇಹದಲ್ಲಿ ಬೊಜ್ಜು ಇದ್ದರೆ ಅದೊಂದು ರೋಗ ಎಂದೇ ವಿವರಿಸಿದೆ. ಜತೆಜತೆಗೇ ಬೊಜ್ಜು ಕರಗಿಸಲು ತಕ್ಕನಾದ ಸೂತ್ರಗಳನ್ನೂ ಹೇಳಿದೆ. ಹೆಚ್ಚಿನ ಬೊಜ್ಜಿನಿಂದ ಹೃದಯ, ಕಿಡ್ನಿ, ಲಿವರ್ ಮತ್ತಿತರ ಭಾಗಗಳಿಗೆ ಒತ್ತಡ ನೀಡುವುದಷ್ಟೇ ಅಲ್ಲ. ಸೊಂಟ, ಮೊಣಕಾಲು, ಕಾಲಿನ ಬುಡದ ಗಂಟಗಳಿಗೂ ಒತ್ತಡ ಹೆಚ್ಚಾಗುತ್ತದೆ. ಪರಿಣಾಮ ಹಲವು ರೋಗಗಳೂ ಆವರಿಸುತ್ತದೆ. ಅಧಿಕ ರಕ್ತದೊತ್ತಡ, ಕೀಲುನೋವು, ಹೃದಯದ ತೊಂದರೆ ಹೀಗೆ ಹತ್ತು ಹಲವು ರೋಗಗಳಿಗೂ ಮೂಲ ಕಾರಣ ಬೊಜ್ಜೇ ಆಗಿರುತ್ತದೆ.
ಹಾಗಾದರೆ ಈ ಬೊಜ್ಜು ಎಲ್ಲಿಂದ ಬಂತು ಎಂದು ಪ್ರಶ್ನೆ ಹಾಕಿದರೆ ಉತ್ತರ ಇಲ್ಲೇ ಇದೆ. ಹೆಚ್ಚು ತಿನ್ನುವುದು, ಸರಿಯಾದ ಸಮಯಕ್ಕೆ ತಿನ್ನದಿರುವುದು, ಜಂಕ್ ಫುಡ್‌ಗಳಿಗೇ ಮೊರೆಹೋಗುವುದು ಇವೆಲ್ಲ ಬೊಜ್ಜು ಬರಲು ಕಾರಣ. ಆದರೆ, ಬೊಜ್ಜು ಇಳಿಸಲು ತಲೆಕೆಡಿಸಿಕೊಂಡು ಮಾನಸಿಕ ಆರೋಗ್ಯವನ್ನೂ ಹಾಳು ಮಾಡಬೇಕಿಲ್ಲ. ಜಾಹಿರಾತುಗಳಲ್ಲಿ ಕಾಣಿಸುವ ಮಾತ್ರೆಗಳನ್ನೋ, ಬೆಲ್ಟ್‌ಗಳನ್ನೋ ಕೊಂಡುಕೊಳ್ಳಬೇಕಿಲ್ಲ. ತುಂಬ ಸುರಕ್ಷಿತವಾದ, ಯಾವುದೇ ಅಪಾಯವಿಲ್ಲದ ಮನೆಮದ್ದಿನಲ್ಲೇ ನಾವು ನಮ್ಮ ತೂಕ ಇಳಿಸಿಕೊಳ್ಳಬಹುದು.

1. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ. ಗೋಧಿಯ ತಿಂಡಿ ತಿಂದರೆ ಉತ್ತಮ. ಒಣ ಚಪಾತಿ ಒಳ್ಳೆಯದು.
3. ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ. ಸಕ್ಕರೆ ಹಾಕದಿದ್ದರೆ ಉತ್ತಮ. ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.
4. ಮಧ್ಯಾಹ್ನ ಊಟಕ್ಕೆ ಹಸಿ ತರಕಾರಿಗಳ ಸಲಾಡ್ ತಿನ್ನಿ. ಕ್ಯಾರೆಟ್, ಸೌತೆಕಾಯಿ, ಕ್ಯಾಬೇಜ್, ಟೋಮೇಟೋಗಳನ್ನು ಹಸಿಯಾಗಿ ಬಳಸಬಹುದು. ಅನ್ನ ಉಣ್ಣಬೇಡಿ. ಒಣ ಚಪಾತಿ ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಚಪಾತಿ ಜತೆಗೆ ತಿನ್ನಬೇಡಿ. ಸಲಾಡ್‌ಗಳೋ, ದಾಲ್‌ಗಳನ್ನೋ ಬಳಸಬಹುದು.
5. ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
6. ನಡು ಮಧ್ಯಾಹ್ನ ಅಥವಾ ಸಂಜೆಯಾಗುತ್ತಾ ಬಂದಾಗ ಎಳೆನೀರು ಉತ್ತಮ. ಇಲ್ಲವಾದರೆ ಲೆಮೆನ್ ಟೀ ಕುಡಿಯಿರಿ. ಅಥವಾ ತಾಜಾ ತರಕಾರಿ ಸೂಪ್ ಕೂಡಾ ಕುಡಿಯಬಹುದು.
7. ರಾತ್ರಿ ಹೋಲ್ ವೀಟ್ ಬ್ರೆಡ್ ಅಥವಾ ಹೋಲ್ ಗ್ರೈನ್ ಬ್ರೆಡ್ ತಿನ್ನಿ. ಅಥವಾ ಚಪಾತಿಯೂ ತಿನ್ನಬಹುದು. ಜತೆಗೆ ಬಾಳೆಹಣ್ಣು ಹಾಗೂ ಆಪಲ್ ಹೊರತುಪಡಿಸಿ ಉಳಿದೆಲ್ಲಾ ಹಣ್ಣುಗಳನ್ನು ತಿನ್ನಬಹುದು. ಬಾಳೆಹಣ್ಣು ತೂಕ ನೀಡುತ್ತದೆ.

ಈ ಆಹಾರ ಪದ್ಧತಿಯನ್ನು ತಿಂಗಳುಗಳ ಕಾಲ ಮಾಡಿದರೆ ಖಂಡಿತಾ ತೂಕ ಇಳಿಯುತ್ತದೆ. ಆದರೆ, ಇಂಥ ಸಿದ್ಧ ಮಾದರಿಯ ಶಿಸ್ತಾದ ಆಹಾರಕ್ರಮ ಸಾಧ್ಯವಾಗದಿದ್ದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಟು ಮಾಡಿಕೊಂಡರೂ ತೂಕ ಇಳಿಕೆ ಸಾಧ್ಯ. ಈ ಕ್ರಮವೂ ಅನುಸರಿಸಬಹುದು.

1. ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಿ. ಬೇಕಾದಷ್ಟೇ ತಿನ್ನಿ. ಅಗತ್ಯಕ್ಕಿಂತ ಹೆಚ್ಚು ಬಾಯಿಗೆ ತುರುಕಬೇಡಿ. ಎಸೆಯಬೇಕಾಗುತ್ತದಲ್ಲ ಅಥವಾ ವೇಸ್ಟ್ ಆಗುತ್ತೆ ಅಂತ ಮುಗಿಸುವುದಕ್ಕೋಸ್ಕರ ಹೊಟ್ಟೆಗೆ ತಳ್ಳಬೇಡಿ. ಹೊಟ್ಟೆ ಡಸ್ಟ್ ಬಿನ್ ಖಂಡಿತಾ ಅಲ್ಲ.
2. ದಿನವೂ ಚುರುಕಿನಿಂದಿರಿ. ಊಟ ಮಾಡಿದ ತಕ್ಷಣ ಹಾಸಿಗೆಯಲ್ಲಿ ಗಡದ್ದಾಗಿ ಮಲಗಬೇಡಿ. ಸ್ವಲ್ಪ ಹೊತ್ತು ಏನಾದರೂ ಕೆಲಸ ಮಾಡುತ್ತಿರಿ. ಊಟ ಹಾಗೂ ನಿದ್ರೆಯ ಮಧ್ಯೆ ಒಂದೆರಡು ಗಂಟೆ ಸಮಯದ ಅಂತರವಿರಲಿ.
3. ಹಸಿ, ತಾಜಾ ಹಣ್ಣು ತರಕಾರಿಗಳನ್ನು ಚೆನ್ನಾಗಿ ತಿನ್ನಿ. ಹೆಚ್ಚು ಕ್ಯಾಲೊರಿಯಿರುವ ಆಹಾರವನ್ನು ಕಡಿಮೆ ಮಾಡಿ.
4. ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಉಪ್ಪು ದೇಹತೂಕವನ್ನು ಹೆಚ್ಚು ಮಾಡುತ್ತದೆ.
5. ಹಾಲಿನ ಉತ್ಪನ್ನಗಳಾದ ಚೀಸ್, ಬೆಣ್ಣೆ ತಿನ್ನಬೇಡಿ. ಮಾಂಸಾಹಾರವೂ ಬೇಡ. ಇವೆಲ್ಲವುಗಳಲ್ಲಿ ಹೆಚ್ಚು ಕೊಬ್ಬು ಇರುತ್ತದೆ.
6. ಪುದಿನ ಸೊಪ್ಪು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಊಟದೊಂದಿಗೆ ತಾಜಾ ಪುದಿನ ಸೊಪ್ಪಿನ ಚಟ್ನಿ ಮಾಡಿ. ಅಥವಾ ಪುದಿನ ಜ್ಯೂಸ್ ಕುಡಿಯಿರಿ.
7. ಮಸಾಲೆಗಳಾದ ಕಾಳುಮೆಣಸು, ಶುಂಠಿ, ಲವಂಗಗಳನ್ನು ಆಹಾರದಲ್ಲಿ ಬಳಸಬಹುದು. ಇವು ತೂಕ ಹೆಚ್ಚು ಮಾಡುವುದಿಲ್ಲ. ಕಡಿಮೆ ಮಾಡಲು ಸಹಕರಿಸುತ್ತವೆ.
8. ಕ್ಯಾರೆಟ್ ಜ್ಯೂಸ್ ಆಗಾಗ ಕುಡಿಯುತ್ತಿರುವುದರಿಂದ ತೂಕ ಕಡಿಮೆ ಮಾಡಬಹುದು.
9. ಅಕ್ಕಿ (ಅನ್ನ) ಹಾಗೂ ಆಲೂಗಡ್ಡೆಯನ್ನು ತುಂಬ ಕಡಿಮೆ ಮಾಡಿ. ಗೋಧಿ ತೂಕ ಇಳಿಸಲು ಒಳ್ಳೆಯದು.
10. ಹಾಗಲಕಾಯಿ, ಕಹಿ ನುಗ್ಗೇಕಾಯಿಯಂತಹ ಕಹಿ ರುಚಿಯ ತರಕಾರಿಗಳು ತೂಕ ಕಡಿಮೆ ಮಾಡುತ್ತವೆ.
11. ಜೇನುತುಪ್ಪ ಧಾರಾಳವಾಗಿ ಸೇವಿಸಬಹುದು. ಇದು ಕೊಬ್ಬನ್ನು ಕರಗಿಸಿ ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
12. ಯಾವಾಗಲಾದರೊಮ್ಮೆ ಜೇನುತುಪ್ಪದ ಉಪವಾಸ ಮಾಡಿದರೆ ಉತ್ತಮ. ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಹದ ಬಿಸಿನೀರಿಗೆ ಸೇರಿಸಿ ಅದ್ಕಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ದಿನವಿಡೀ ಆಗಾಗ ಕುಡಿಯಬಹುದು.

13. ಹಸಿ ಅಥವಾ ಬೇಯಿಸಿದ ಕ್ಯಾಬೇಜನ್ನು ತಿನ್ನುವುದರಿಂದಲೂ ತೂಕ ಕಡಿಮೆಮಾಡಬಹುದು.
14. ವ್ಯಾಯಾಮ ಕೂಡ ತೂಕ ಕರಗಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತದೆ. ವಾಕಿಂಗ್ ಕೂಡಾ ತುಂಬ ಉತ್ತಮ. ವ್ಯಾಯಾಮ ಮಾಡಲು ಸಾಧ್ಯವಾಗದವರು ವಾಕಿಂಗ್‌ನಿಂದ ಶುರುಮಾಡಿ ನಿಧಾನವಾಗಿ ಓಡಲು ಅಭ್ಯಾಸ ಮಾಡಬಹುದು. ನಿಗದಿತ ವ್ಯಾಯಾಮದ ಜತೆಗೆ ವಾಕಿಂಗ್ ಕೂಡಾ ಉತ್ತಮ.
15. ಆಹಾರದ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಂಡು ಬಹುತೇಕರು ತೂಕ ಇಳಿಸಿದ ನಂತರ ಮತ್ತೆ ಹಳೆಯ ಆಹಾರಪದ್ಧತಿಗೇ ಮರಳುತ್ತಾರೆ. ಇದರಿಂದ ಮತ್ತೆ ಶರೀರ ದಪ್ಪವಾಗುತ್ತದೆ. ಇದಕ್ಕಾಗಿ ನಿಗದಿತ ಯೋಗಾಭ್ಯಾಸ ರೂಢಿಯಲ್ಲಿಟ್ಟರೆ, ಜೀವನವಿಡೀ ಆರೋಗ್ಯಯುತ ಕಾಂತಿಯುತ ಶಿಸ್ತಿನ ಜೀವನ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ತೆಳು ಮೈಕಟ್ಟು ಕೂಡಾ.

ಸೌಂದರ್ಯ ಚಿಕಿತ್ಸೆ ನಿಮ್ಮ ಪ್ರಾಣಕ್ಕೆ ಮುಳುವಾಗದಿರಲಿ!

ಇದಕ್ಕಿಂತಲೂ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಸೌಂದರ್ಯ ಚಿಕಿತ್ಸೆಯೆಂದರೆ ಬಟೋಕ್ಸ್ ಟ್ರೀಟ್‌ಮೆಂಟ್. ಸದಾ ಯೌವನಭರಿತರಾಗಿ ಕಾಣಲು ಅಪೇಕ್ಷೆಯಿರುವ ನಾರೀಮಣಿಯರು ಇಂತಹ ಚಿಕಿತ್ಸೆಯ ಮೊರೆಹೋಗುತ್ತಾರೆ. ಸುಕ್ಕುಗಟ್ಟಿರುವ ಚರ್ಮವನ್ನು ಯೌವನಭರಿತವಾಗಿ ಕಾಣಿಸಲು ಚರ್ಮದ ಆ ಭಾಗಕ್ಕೆ ಬಟೋಕ್ಸ್ ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ಸರಿಪಡಿಸುವ ಚಿಕಿತ್ಸೆಯಿದು. 1997ರಿಂದ ಈವರೆಗೆ ವಿಶ್ವದಾದ್ಯಂತ ಈ ಚಿಕಿತ್ಸೆ 2,400 ಶೇಕಡಾಗಳಷ್ಟು ಹೆಚ್ಚಿದೆಯೆಂದರೆ ಈ ಚಿಕಿತ್ಸೆಯ ಬೇಡಿಕೆಯನ್ನು ಊಹಿಸಿಕೊಳ್ಳಬಹುದು. ಟಿವಿ ವಾಹಿನಿಗಳಲ್ಲಿ ಸದಾ ಕ್ಯಾಮರಾ ಮುಂದೆ ನಿಲ್ಲುವ ನಿರೂಪಕಿಯರು, ಸೆಲೆಬ್ರಿಟಿಗಳು, ಫ್ಯಾಷನ್ ಲೋಕದ ಬೆಡಗಿಯರು, ನಟೀಮಣಿಯರು ಸೇರಿದಂತೆ ಈಗ ಸಾಮಾನ್ಯ ಮನುಷ್ಯವರೆಗೂ ತಲುಪಿರುವ ಚಿಕಿತ್ಸೆಯಿದು. ಇಂಟರ್‌ನ್ಯಾಷನಲ್ ಕಾನ್ಫೆಡರೇಶನ್ ಫಾರ್ ಪ್ಲಾಸ್ಟಿಕ್ ರಿಕನ್‌ಸ್ಟ್ರಕ್ಷನ್ ಅಂಡ್ ಏಸ್ತೆಟಿಕ್ ಸರ್ಜರಿಯ ಅಧ್ಯಕ್ಷ ರಾಜೀವ್ ಬಿ.ಅಹುಜಾ ಹೇಳುವಂತೆ, ಜಾಹಿರಾತುಗಳು ಪ್ರದರ್ಶಿಸುವ ಚಿತ್ರಗಳಿಂದ ಬಹುಬೇಗನೆ ಜನರ ಇಂತಹ ಸೌಂದರ್ಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವತ್ತ ಜನರು ವಾಲುತ್ತಾರೆ. ಸೌಂದರ್ಯ ಇಮ್ಮಡಿಗೊಳಿಸುವ ಬಲವಾದ ಆಸೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮನಸ್ಥಿತಿಯನ್ನೂ ತಲುಪುತ್ತಾರೆ. ಹಾಗಾಗಿ ಇಂತಹ ಒತ್ತಡ ಮನಸ್ಥಿತಿ ತಲುಪುವ ಸೌಂದರ್ಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ನಿಜವಾಗಿ ಮಾನಸಿಕ ವೈದ್ಯರ ಅಗತ್ಯವಿದೆ ಎಂದು ನನಗಿಸುತ್ತದೆ ಎನ್ನುತ್ತಾರೆ ಅಹುಜಾ.ಚೆಂದದ ಬಳುಕುವ ಸೊಂಟ, ಬೇಕಾದ ಆಕಾರದ ಮೂಗು, ಸುಂದರ ಪುಟಾಣಿ ಗಲ್ಲ, ಯೌವನಭರಿತವಾಗಿ ಕಾಣುವ ಚರ್ಮ, ಸೆಕ್ಸೀ ಫಿಗರ್... ಹೀಗೆ ನಾನಾ ಸೌಂದರ್ಯ ಚಿಕಿತ್ಸೆ ಮಾಡಿಸುತ್ತೇವೆಂಬ ಹಲವು ಜಾಹಿರಾತುಗಳೀಗ ಸರ್ವೇ ಸಾಮಾನ್ಯ. ಭಾರತದಲ್ಲಿ ಇಂತಹ ಸೌಂದರ್ಯ ಶಸ್ತ್ರಚಿಕಿತ್ಸೆಗಳ ಸಂಖ್ಯೆಯೂ, ಜಾಹಿರಾತುಗಳ ಮೋಡಿಗೊಳಗಾಗಿ ಮಾಡಿಸಿಕೊಳ್ಳುವವರ ಸಂಖ್ಯೆಯೂ ದಿನೇ ದಿನೇ ಜಾಸ್ತಿಯಾಗುತ್ತಲೇ ಇವೆ. ಆದರೆ, ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನಾಗಲೀ, ಕೃತಕ ಸೌಂದರ್ಯ ಚಿಕಿತ್ಸೆಯನ್ನಾಗಲೀ ಮಾಡಿಸುವ ಮೊದಲು ಒಂದು ಕ್ಷಣ ಯೋಚಿಸುವುದು ಒಳಿತು.
ಇತ್ತೀಚೆಗೆ ಕೆಲ ದಿನಗಳ ಹಿಂದಷ್ಟೇ, ಅರ್ಜೆಂಟೈನಾದ ಮಾಜಿ ಸುಂದರಿ ಗುಡಾಲುಪೆ ಮ್ಯಾಗ್‌ನ್ಯಾನೋ ತನ್ನ ಸುಂದರ ಸೆಕ್ಸೀ ಹಿಂಭಾಗಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದವಳು ಮತ್ತೆ ಮರಳಿ ಜೀವ ಪಡೆಯಲಿಲ್ಲ. ತನ್ನ ಸೌಂದರ್ಯ ಇಮ್ಮಡಿಗೊಳಿಸಿ ಪ್ರಪಂಚಕ್ಕೇ ತನ್ನ ಸುಂದರ ಹಿಂಭಾಗ ಪ್ರದರ್ಶಿಸುವ ಯೋಚನೆಯಿಂದ ಶಸ್ತ್ರಚಿಕಿತ್ಸೆಗೆ ಹೊರಟ ಈ ಸುಂದರಿ ಇಹಲೋಕ ತ್ಯಜಿಸಿದಳು. ಇದು ಕೇವಲ ಒಬ್ಬರ ಕಥೆಯಲ್ಲ. ಇಂತಹ ಎಷ್ಟೋ ಪ್ರಕರಣಗಳು ನಡೆಯುತ್ತವೆ. ಸೌಂದರ್ಯಕ್ಕೇ ಪ್ರಾಣವನ್ನೇ ಒತ್ತೆಯಿಟ್ಟ ಪ್ರಕರಣಗಳು ಅದೆಷ್ಟೋ ಇವೆ. ಆದರೆ ಬೆಳಕಿಗೆ ಬರೋದು ಕಡಿಮೆಯಷ್ಟೆ.
ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ರಾಕೇಶ್ ಖಜಾಂಚಿ ಹೇಳುವ ಪ್ರಕಾರ, ಕಳೆದೈದು ವರ್ಷಗಳಿಂದ ಕಾಸ್ಮೆಟಿಕ್ ಸರ್ಜರಿಗಳಾದ ರಿನೋಪ್ಲಾಸ್ಟಿ (ಸುಂದರ ಮೂಗಿಗಾಗಿ ಇರುವ ಶಸ್ತ್ರಚಿಕಿತ್ಸೆ), ಲಿಪೋಸಕ್ಷನ್ (ತುಟಿಗಳ ಶಸ್ತ್ರಚಿಕಿತ್ಸೆ), ಮೇಲ್ ಬ್ರೆಸ್ಟ್ ರಿಡಕ್ಷನ್ (ಪುರುಷರ ಎದೆ ಸರಿಪಡಿಸುವ ಶಸ್ತ್ರಚಿಕಿತ್ಸೆ), ಫೀಮೇಲ್ ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ (ಮಹಿಳೆಯರ ಎದೆಯುಬ್ಬಿಸುವ ಶಸ್ತ್ರಚಿಕಿತ್ಸೆ), ಅಬ್ಡಮಿನೋಪ್ಲಾಸ್ಟಿ (ಹೊಟ್ಟೆಯನ್ನು ತೆಳ್ಳಗಾಗಿಸಿ ಆಕಾರ ಸರಿಪಡಿಸುವ ಶಸ್ತ್ರಚಿಕಿತ್ಸೆ) ಮುಂತಾದ ಶಸ್ತ್ರಚಿಕಿತ್ಸೆಗಳು ಶೇ.150ರಷ್ಟು ಹೆಚ್ಚಾಗಿವೆ. ಸರ್ಜಿಕಲ್ ಸಾಧನಗಳನ್ನು ಬಳಸದೆ ಮಾಡುವಂಥ ಸೌಂದರ್ಯ ಚಿಕಿತ್ಸೆಗಳಾದ ಬಟೋಕ್ಸ್ ಟ್ರೀಟ್‌ಮೆಂಟ್‌ಗಳಂತೂ ತೀರಾ ಹೆಚ್ಚಿವೆ. ಇಂಥವುಗಳನ್ನು ಸಾಮಾನ್ಯರೂ ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯವಾಗಿದೆ ಎನ್ನುತ್ತಾರೆ ಅವರು.
ಮೈಕ್ರೋಡರ್ಮಾಬ್ರೇಶನ್ ಕೂಡಾ ಸದ್ಯ ಅತ್ಯಂತ ಪ್ರಚಾರದಲ್ಲಿರುವ ಕಾಸ್ಮೆಟಿಕ್ ಚಿಕಿತ್ಸೆ. ಈ ಚಿಕಿತ್ಸೆ ಮೂಲಕ ಚರ್ಮದ ಸತ್ತ ಹೊರಪದರ ಹಾಗೂ ಒಣಗಿರುವಂಥ ಕಳಾಹೀನ ಪದರವನ್ನು ತೆಗೆದು ಹಾಕಿ ಒಳಚರ್ಮ ಕಾಣುವಂತೆ ಮಾಡಲಾಗುತ್ತದೆ. ಇದರಿಂದ ಇನ್ನೂ ಯೌವನಭರಿತರಾಗಿ ಕಾಣುವಂತಾಗುತ್ತದೆ. ಇದಲ್ಲದೆ, ಕೊಲಾಜೆನ್ ಇಂಜೆಕ್ಷನ್, ಲೇಜರ್ ಹೇರ್ ರಿಮೂವಲ್ (ಶಾಶ್ವತವಾಗಿ ಬೇಡದ ಕೂದಲುಗಳನ್ನು ತೆಗೆಯುವ ಚಿಕಿತ್ಸೆ), ಕೆಮಿಕಲ್ ಪೀಲ್ (ರಸಾಯನಿಕಗಳನ್ನು ಉಪಯೋಗಿಸಿ ಮುಖದ ಹಳೆ ಚರ್ಮ ತೆಗೆದು ಆ ಜಾಗದಲ್ಲಿ ಹೊಸ ಚರ್ಮ ಬೆಳೆಯುವಂತೆ ಮಾಡಿ ಯೌವನಭರಿತರಾಗಿಸುವ ಚಿಕಿತ್ಸೆ) ಮುಂತಾದ ಚಿಕಿತ್ಸೆಗಳಿಗೆ ಈಗ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ಅವರು.
ಜಾಹಿರಾತುಗಳಲ್ಲಿ ಶೇ.100ರಷ್ಟು ಅಡ್ಡಪರಿಣಾಮಗಳಿಲ್ಲದ ಶಸ್ತ್ರಚಿಕಿತ್ಸೆ ಎಂದು ಬರೆಯುತ್ತಾರಾದರೂ, ಹಲವು ಪ್ರಕರಣಗಳಲ್ಲಿ ಅತಿ ರಕ್ತಸ್ರಾವ, ಭಯ ಹೊಂದುವಂತಹ ಮಾನಸಿಕ ದಗುಡ ಹೆಚ್ಚಾಗುವಿಕೆ, ನರ ದೌರ್ಬಲ್ಯ, ಹೊಸ ಚರ್ಮ ಬೆಳೆಯುವ ಮೊದಲೇ ಚರ್ಮ ಸತ್ತುಹೋಗುವುದು ಮುಂತಾಹ ರೋಗಗಳಿಗೂ ಕಾರಣವಾಗುತ್ತದೆ. ಹಲವು ಸಂದರ್ಭಗಳಲ್ಲಿ ಪಾರ್ಶ್ವವಾಯುವಿನಂಥ ಕಾಯಿಲೆಗಳೂ ಇಂಥ ಚಿಕಿತ್ಸೆಗಳಿಂದ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.
ಮಹಿಳೆಯರು ಇಂಥ ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯ. ಪುರುಷರೂ ಇಂಥ ಚಿಕಿತ್ಸೆಗಳತ್ತ ಇತ್ತೀಚೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಇವರೆಲ್ಲಾ, ಇಂಥ ಎಷ್ಟೋ ಸಂಗತಿಗಳು ಗೊತ್ತಿದ್ದೂ ಗೊತ್ತಿದ್ದೂ ಶಸ್ತ್ರಚಿಕಿತ್ಸೆಯಡಿ ತಮ್ಮನ್ನು ಒಡ್ಡಿಕೊಳ್ಳುವ ಪ್ರಜ್ಞಾವಂತ ಮಂದಿ! ಬಾಲಿವುಡ್ ಬೆಡಗಿಯರಾದ ಪ್ರಿಯಾಂಕಾ ಛೋಪ್ರಾ, ಕಂಗನಾ ರಾಣಾವತ್, ಕೊಯಿನಾ ಮಿತ್ರಾ ಮತ್ತಿತರರು ತಮ್ಮ ತುಟಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ, ಶಿಲ್ಪಾ ಶೆಟ್ಟಿ ಮೂಗು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಲ್ಲದೆ, ಶೆರ್ಲಿನ್ ಛೋಪ್ರಾರಂತಹ ಹಲವು ಬಿಚ್ಚಮ್ಮ ನಟಿಯರು ಸೆಕ್ಸೀಯಾಗಿ ಕಾಣಲು ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ ಕೂಡಾ ಮಾಡಿಸಿಕೊಂಡಿದ್ದು ಸುದ್ದಿಯಾಗಿವೆ.
ದುಬಾರಿಯಾಗಿರುವ ಇಂಥ ಚಿಕಿತ್ಸೆಗಳೀಗ ಸಾಕಷ್ಟು ಕೈಗೆಟಕುವ ಕಡಿಮೆ ಬೆಲೆಗೂ ಬರುತ್ತಿವೆ. ಅಡ್ಡಪರಿಣಾಮಗಳಿಲ್ಲದೆ ಎಷ್ಟೋ ಮಂದಿ ಇಂತಹ ಕೃತಕ ವಿಧಾನಗಳಿಂದ ಜಗತ್ತಿಗೇ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ ಎಂಬುದೂ ಕೂಡಾ ಅಷ್ಟೇ ಸತ್ಯ. ಆದರೂ, ಅದೇನೇ ಇರಲಿ, ಸೌಂದರ್ಯ ಪ್ರಾಕೃತಿಕವಾದುದು ಎಂಬುದಂತೂ ಸಾರ್ವಕಾಲಿಕ ಸತ್ಯ. ಅದನ್ನು ಹೆಚ್ಚಿಸಲು ಎಷ್ಟೇ ಕೃತಕ ಉಪಾಯಗಳನ್ನು ಮಾಡಿದರೂ ಅದು ನೈಸರ್ಗಿಕ ಸೌಂದರ್ಯವಾಗಲಾರದು. ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯದತ್ತ ಹೆಚ್ಚು ಗಮನ ನೀಡಿದರೆ, ಬಾಹ್ಯ ಸೌಂದರ್ಯ ತನ್ನಿಂದ ತಾನೇ ಇಮ್ಮಡಿಗೊಳ್ಳುತ್ತದೆ. ನೈಸರ್ಗಿಕ ವಿಧಾನಗಳಿಂದಲೇ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಲು ಅಂದಿನಿಂದಲೂ ತಲೆತಲಾಂತರಗಳಿಂದ ಹಿರಿಯರು ಬೋಧಿಸುತ್ತಲೇ ಬಂದುದು ಬಹುಶಃ ಇದಕ್ಕೇ ಇರಬೇಕು ಅಲ್ಲವೇ?



ಅಂದದ ಗುಲಾಬಿಯಂಥಾ ತುಟಿಗೆ ಇಲ್ಲಿವೆ ಉಪಾಯ!


ಅಂದದ ತುಟಿ ಯಾರು ತಾನೇ ಬಯಸಲ್ಲ ಹೇಳಿ. ಗುಲಾಬಿಯ ಪಕಳೆಯಂತೆ ಪಿಂಕ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಸಾಮಾನ್ಯ. ಚಳಿಗಾಲದಲ್ಲಂತೂ, ತುಟಿ ಒಣಗಿ, ಒಡೆದು ರಕ್ತ ಸೋರುತ್ತಿದ್ದರೆ, ಮುಖ ತೋರಿಸಲು ನಾಚಿಕೆಯಾಗುವ ಅನುಭವ ಎಲ್ಲರಿಗೂ ಇದೆ. ಆದರೆ ಇದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದರೂ ಕೆಲವೊಮ್ಮೆ ಸಾಕಾಗುವುದಿಲ್ಲ. ಹಾಗಾಗಿ ನೈಸರ್ಗಿಕವಾಗಿಯೂ ನಿಮ್ಮ ತುಟಿಯನ್ನು ತಾಜಾ ಆಗಿ ಗುಲಾಬಿ ದಳದಂತೆ ಸುಂದರವಾಗಿ ಕಾಣಲು ನೀವು ಮನೆಯಲ್ಲೇ ಕೆಲವು ಉಪಾಯಗಳನ್ನು ಮಾಡಬಹುದು. ಅವುಗಳ ಒಂದು ಝಲಕ್ ಇಲ್ಲಿದೆ.
ತುಟಿ ನಯವಾಗಿ ಕಾಣಬೇಕಿದ್ದರೆ, ನೀವು ಹಲ್ಲುಜ್ಜುವ ಬ್ರಷ್‌ನಿಂದ ಮೆದುವಾಗಿ ವೃತ್ತಾಕಾರವಾಗಿ ನಿಮ್ ತುಟಿಯ ಮೇಲೆ ಉಜ್ಜಿ. ಇದರಿಂದ ತುಟಿಯ ಮೇಲ್ಮೈಯಲ್ಲಿನ ಒಣಗಿದ ಸತ್ತ ಚರ್ಮ ಮಾಯವಾಗುತ್ತದೆ. ನಂತರ ತುಟಿಯನ್ನು ತೊಳೆದು ಮಾಯ್‌ಶ್ಚರೈಸರ್ ತುಟಿಗೆ ಹಚ್ಚಿ. ತುಟಿ ನಯವಾಗಿ ಹೊಳೆಯುತ್ತದೆ.
ಪ್ರತಿ ರಾತ್ರಿಯೂ ಮಲಗುವ ಮುನ್ನ ತುಟಿಗೆ ಮಾಯ್‌ಶ್ಚರೈಸರ್ ಹಚ್ಚಿ ಮಲಗಿ. ಮೃದುವಾದ ನುಣುಪಾದ ತುಟಿಗಳು ನಿಮ್ಮದಾಗುತ್ತದೆ.
ರೋಸ್ ವಾಟರ್ ಹಾಗೂ ಸಕ್ಕರೆ ಸೇರಿಸಿ ತುಟಿಗೆ ಪ್ರತಿದಿನವೂ ಮಸಾಜ್ ಮಾಡಿ. ಇದು ನಿಮ್ಮ ತುಟಿಯನ್ನು ಗುಲಾಬಿ ದಳದಷ್ಟೇ ಮೃದು, ನಯ ಹಾಗೂ ಹೊಳೆಯುವಂತೆ ಮಾಡುತ್ತದೆ.
ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತದೆ. ಹಾಗಾಗಿ ಯಾವತ್ತೂ ಧೂಮಪಾನ ಮಾಡಬೇಡಿ. ಧೂಮಪಾನ ನಿಮ್ಮ ತುಟಿಯನ್ನು ಕಪ್ಪಾಗಿಸುವ ಜೊತೆಗೆ, ಹೀಗಾಗಿ ತುಟಿ ಒಣಗಿದಂತೆ ಕಳಾಹೀನವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಇಂಥ ತುಟಿಯನ್ನು ಸೂರ್ಯದ ಕಿರಣಗಳು ಬಹುಬೇಗನೆ ಘಾಸಿ ಮಾಡುತ್ತದೆ. ಹೀಗಾಗಿ ಧೂಮಪಾನಿಗಳು ನೀವಾಗಿದ್ದರೆ ಹೊರಗೆ ಸಂಚರಿಸುವಾಗ ನಿಮ್ಮ ತುಟಿಗೆ ಸನ್‌ಸ್ಕ್ರೀನ್ ಲೋಶನ್ ಹಚ್ಚಿ.
ಅಂದದ ತುಟಿಗೆ ನೈಸರ್ಗಿಕ ಉಪಾಯ: ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ತಾಜಾ, ಪಿಂಕ್ ಹಾಗೂ ಆರೋಗ್ಯಕರವಾಗಿ ಕಾಣಿಸಲು ನಿಮ್ಮ ಅಡುಗೆ ಮನೆಯಲ್ಲೇ ಹಲವು ಉಪಾಯಗಳಿವೆ. ಅದಕ್ಕಾಗಿ ನೀವು ಮೊದಲು ತುಂಬ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ತುಟಿಯನ್ನು ಒಡೆಯಲು, ರಕ್ತ ಸೋರಲು ಅಥವಾ ಒಣಗಲು ಬಿಡಬೇಡಿ. ಮಾಯ್‌ಶ್ಚರೈಸರ್ ಸದಾ ಬಳಸುತ್ತಿದ್ದರೆ ತುಟಿ ಹೀಗಾಗುವುದನ್ನು ತಪ್ಪಿಸಬಹುದು.
ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ತಿನ್ನಿ. ಸಲಾಡ್, ಹಣ್ಣುಗಳ ಜ್ಯೂಸ್ ಸೇವಿಸುತ್ತಾ ಇರಿ. ಇದು ನಿಮ್ಮ ತುಟಿಯನ್ನು ತಾಜಾ ಆಗಿರಿಸುತ್ತದೆ. ಅಲ್ಲದೆ, ನಯವಾಗಿ ಹೊಳೆಯುವ ಆರೋಗ್ಯಭರಿತ ತುಟಿ ಕಂಗೊಳಿಸುವಂತೆಯೂ ಮಾಡುತ್ತದೆ.
ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನಿ. ಇದು ನಿಮ್ಮ ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯವಂತೆ ಮಾಡುತ್ತದೆ.
ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ. ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.ನೈಸರ್ಗಿಕವಾಗಿ ಪಿಂಕ್ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್‌ರೂಟ್‌ನ್ನು ಲೇಪಿಸಿ ಮಲಗಿ.
ಲಿಪ್‌ಸ್ಟಿಕ್ ಟಿಪ್ಸ್: ಲಿಪ್‌ಸ್ಟಿಕ್ ದಿನವೂ ಬಳಸುವುದು ಒಳ್ಳೆಯದಲ್ಲ. ದಿನವೂ ಬಳಸಿದರೆ, ತುಟಿ ತನ್ನ ಎಂದಿನ ಕಳೆಯನ್ನು ಕಳೆದುಕೊಳ್ಳುತ್ತದೆ. ಆದರೂ ಹಲವರಿಗೆ ದಿನವೂ ಬಳಸುವುದು ಅನಿವಾರ್ಯವಾಗಿರುತ್ತದೆ. ಅದಕ್ಕಾಗಿ, ಪ್ರತಿಬಾರಿಯೂ ನೀವು ನೇರವಾಗಿ ತುಟಿಯ ಮೇಲೆ ಲಿಪ್‌ಸ್ಟಿಕ್ ಹಚ್ಚಬೇಡಿ. ಇದು ನಿಮ್ಮ ತುಟಿಯ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾಗಿ ಮೊದಲು ತುಟಿಯ ಮೇಲೆ ಲಿಪ್ ಬಾಮ್ ಅನ್ನು ಹಚ್ಚಿ, ನಂತರ ಅದರ ಮೇಲೆ ಲಿಪ್‌ಸ್ಟಿಕ್ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್‌ಸ್ಟಿಕ್ ದಿನವಿಡೀ ಫ್ರೆಶ್ ಆಗಿ ಕಾಣಿಸುತ್ತದೆ. ಜೊತೆಗೆ ತುಟಿಗೆ ನೇರ ಹಾನಿಯೂಗುವುದೂ ತಪ್ಪುತ್ತದೆ.
ಇನ್ನೂ ಕೆಲವರು ಲಿಪ್‌ಸ್ಟಿಕ್ ಬಳಸಿದರೂ ಬಳಸಲು ಸರಿಯಾದ ಕ್ರಮ ತಿಳಿದಿರುವುದಿಲ್ಲ. ಹಾಗಾಗಿ, ಅಂಥವರು ಮೊದಲು ಲಿಪ್ ಬಾಮ್ ಬಳಸಿ ಅದರ ಮೇಲೆ ಮೃದುವಾಗಿ ತೆಳುವಾಗಿ ಲಿಪ್‌ಸ್ಟಿ ಹಚ್ಚಿ. ನಂತರ ಲಿಪ್ ಲೈನರ್ ತೆಗೆದುಕೊಂಡು ತುಟಿಯ ಔಟ್‌ಲೈನ್‌ಗೆ ಪೂರ್ತಿಯಾಗಿ ಗೆರೆ ಎಳೆಯಿರಿ. ಈಗ ನಿಮ್ಮ ತುಟಿ ಸಂಪೂರ್ಣವಾಗಿ ಕಾಣುತ್ತದೆ. ಈ ಕ್ರಮ ಅನುಸರಿಸುವ ಮೊದಲು ಇನ್ನೊಂದು ಕ್ರಮವನ್ನೂ ಅನುಸರಿಸಬಹುದು. ಅದು, ಲಿಪ್ ಬಾಮ್ ಹಚ್ಚಿದ ಮೇಲೆ ಲಿಪ್ ಲೈನರ್‌ನಿಂದ ನಿಮ್ಮ ತುಟಿಯ ಔಟ್‌ಲೈನ್‌ಗೆ ಸರಿಯಾಗಿ ಗೆರೆ ಎಳೆದು ಆಮೇಲೆ ಲಿಪ್‌ಸ್ಟಿಕ್ ಹಚ್ಚಿ. ಈ ಕ್ರಮದಿಂದ ನಿಮ್ಮ ಲಿಪ್‌ಸ್ಟಿಕ್ ಹೆಚ್ಚು ಕಾಲ ಉಳಿಯುತ್ತದೆ,
ಕೆಲವರಿಗೆ ಕಡು (ಡಾರ್ಕ್) ಬಣ್ಣಗಳ ಲಿಪ್‌ಸ್ಟಿಕ್ ಇಷ್ಟವಿರುದಿಲ್ಲ ಹಾಗೂ ಲಿಪ್‌ಸ್ಟಿಕ್ ಹೆಚ್ಚು ಢಾಳಾಗಿ ಕಾಣಿಸಲು ಇಷ್ಟಪಡುವುದಿಲ್ಲ. ಅಂಥವರು ಮೊದಲು ಲಿಪ್‌ಲೈನರ್ ಬಳಸಿ ನಂತರ ಲಿಪ್‌ಸ್ಟಿಕ್ ಹಚ್ಚುವುದು ಒಳ್ಳೆಯದು. ಇದು ತುಟಿಯಲ್ಲಿ ಅಷ್ಟಾಗಿ ಎದ್ದು ಕಾಣುವುದಿಲ್ಲ.
ಲಿಪ್ ಸ್ಟಿಕ್ ಹಚ್ಚಿದ ಮೇಲೆ ಟಿಶ್ಯೂ ಪೇಪರನ್ನು ಮೆದುವಾಗಿ ತುಟಿಯಿಂದ ಪ್ರೆಸ್ ಮಾಡಿ. ಆಗ ಹೆಚ್ಚುವರಿ ಲಿಪ್‌ಸ್ಟಿಕ್ ಪೇಪರಿಗೆ ಅಂಟಿಕೊಳ್ಳುತ್ತದೆ.
ಇನ್ನು ಲಿಪ್ ಸ್ಟಿಕ್ ಆಯ್ಕೆಯ ಗೊಂದಲ ಹಲವರಲ್ಲಿರುತ್ತದೆ. ಹಾಗಾಗಿ ತಮಗೆ ಹೊಂದದ ಲಿಪ್‌ಸ್ಟಿಕ್ ಕೊಂಡು ಆಮೇಲೆ ಪೇಚಾಟ ಅನುಭವಿಸುವವರು ಹೆಚ್ಚು. ತೆಳು ಪಿಂಕ್ ಬಣ್ಣದ ಮುಖ ನಿಮ್ಮದಾಗಿದ್ದರೆ ಅಂಥವರು ಚೆರ್ರಿ ರೆಡ್ ಬಣ್ಣದ ಲಿಪ್‌ಸ್ಟಿಕ್ ಆರಿಸಬಹುದು. ಬೆಳ್ಳಗಿನ ಮೈಬಣ್ಣ ನಿಮ್ಮದಾಗಿದ್ದರೆ, ನೀವು ತೆಳು ಪಿಂಕ್, ತೆಳು ಹವಳದ ಬಣ್ಣ ಅಥವಾ ಆಪ್ರಿಕಾಟ್ ಬಣ್ಣದ ಲಿಪ್‌ಸ್ಟಿಕ್ ಆರಿಸಿ. ಗೋಧಿ ಬಣ್ಣದವರು ನೀವಾಗಿದ್ದರೆ ಸ್ವಲ್ಪ ಡಾರ್ಕ್ ಕಲರ್‌ಗಳ ಮೊರೆ ಹೋಗಬೇಕು. ನಿಮಗೆ, ಎಂಜಿನ್ ರೆಡ್ ಬಣ್ಣದ ಲಿಪ್‌ಸ್ಟಿಕ್ ಅಥವಾ, ರೋಸ್ ರೆಡ್, ಬೆರ್ರಿ ಕಲರ್‌ಗಳನ್ನು ಆರಿಸಬಹುದು. ಕಪ್ಪು ಬಣ್ಣದ ಚರ್ಮ ನಿಮ್ಮದಾಗಿದ್ದರೆ ಅಂಥವರು ಡೀಪ್ ರೆಡ್ ಬಣ್ಣದ ಅಥವಾ ಚಾಕೋಲೇಟ್ ಬಣ್ಣ, ಕಂದು ಕೆಂಪು ಬಣ್ಣವಿರುವ ಲಿಪ್ ಸ್ಟಿಕ್ ಆರಿಸಿ. ಕಪ್ಪು ಮೈಬಣ್ಣ ನಿಮ್ಮದಾಗಿದ್ದರೆ, ನೀವು ನಿಮ್ಮ ಅಂಗಿಯ ಬಣ್ಣಕ್ಕೆ ಲಿಪ್‌ಸ್ಟಿಕ್ ಮ್ಯಾಚ್ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ.

ನಿಮ್ಮ ಮುಖದ ಸಮಸ್ಯೆಗೆ ನಿಮ್ಮಲ್ಲೇ ಇದೆ ಸೂಕ್ತ ಪರಿಹಾರ!


ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ? ಅಡುಗೆ ಮನೆಯಲ್ಲೇ ಹಲವಾರು ನೈಸರ್ಗಿಕ ಕೊಡುಗೆಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಆಯ್ಕೆಯನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು.
ಸಾಮಾನ್ಯ ತ್ವಚೆಗೆ
1.
ಕಿತ್ತಳೆ ಹಾಗೂ ಟೊಮ್ಯಾಟೋ ಹಣ್ಣಿನ ಸ್ವಲ್ಪ ರಸ ತೆಗೆದು ಅದಕ್ಕೆ ಒಂದು ಚಮಚದಷ್ಟು ಮೊಸರು ಸೇರಿಸಿ. ಈ ಮಿಶ್ರಣದಿಂದ ಮೆತ್ತಗೆ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಮುಖದಲ್ಲೇ ಒಣಗಲು ಬಿಡಿ. ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
2.
ಪಪ್ಪಾಯಿ ಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.
3.
ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಇದು ಸಡಿಲವಾದ ಚರ್ಮವನ್ನು ಟೈಟ್ ಮಾಡುವುದಲ್ಲದೆ, ಸುಕ್ಕುಗಳಿಂದಲೂ ಮುಕ್ತಿ ನೀಡುತ್ತದೆ.
4.
ಸ್ವಲ್ಪ ಕ್ಯಾರೇಟನ್ನು ತುರಿದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮತ್ತೆ ಚರ್ಮಕ್ಕೆ ತಾಜಾತನವನ್ನು ನೀಡಿ ಸುಂದರವಾಗಿಸುತ್ತದೆ. ಇದು ಚರ್ಮಕ್ಕೆ ಟಾನಿಕ್ ಇದ್ದಂತೆ.
5.
ಪ್ರತಿ ಬಾರಿಯೂ ಆಪಲ್ ತಿನ್ನುವಾಗ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಉಜ್ಜಿ. ಇದು ಚರ್ಮವನ್ನು ಟೈಟ್ ಮಾಡುವುದಲ್ಲದೆ, ಪರಿಶುದ್ಧಗೊಳಿಸುತ್ತದೆ.
6.
ಪ್ರತಿದಿನವೂ ಮುಖ ತೊಳೆದ ನಂತರ ಐಸ್ ತುಂಡನ್ನು ಮುಖಕ್ಕೆ ವರ್ತುಲಾಕಾರದಲ್ಲಿ ಒತ್ತಿ ಉಜ್ಜಿ. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುವ ಮೂಲಕ ಮುಖಕ್ಕೆ ತಾಜಾ ರಕ್ತದ ಪೂರಣವಾಗುತ್ತದೆ. ಹಾಗಾಗಿ ಮುಖದ ಹೊಳಪು ಹೆಚ್ಚುತ್ತದೆ.
7.
ಸ್ವಲ್ಪ ನಿಂಬೆ ಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರನ್ನು ಒಂದು ಟ್ರೇನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿ ಮಾಡಿ. ಹೀಗೆ ಗಟ್ಟಿಯಾದ ಐಸ್ ತುಂಡನ್ನೂ ಮುಖಕ್ಕೆ ಉಜ್ಜಬಹುದು.
8.
ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದ ಚರ್ಮವನ್ನು ಟೈಟ್ ಮಾಡುತ್ತದೆ. ಅಲ್ಲದೆ ಸುಕ್ಕನ್ನೂ ತಡೆಗಟ್ಟುತ್ತದೆ.
ತೈಲಯುತ ತ್ವಚೆಗೆ
1.
ಗೋಧಿ ಹುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿರುವ ಹೆಚ್ಚಿನ ಎಣ್ಣೆಯಂಶವನ್ನು ತೆಗೆದುಹಾಕಿ ಚರ್ಮವನ್ನು ಫ್ರೆಶ್ ಆಗಿಸುತ್ತದೆ.
2.
ಕುದಿಸದ ಹಸಿ ಹಾಲಿಗೆ ಅಷ್ಟೇ ಪ್ರಮಾಣದ ಸೌತೆಕಾಯಿ ರಸ ಸೇರಿಸಿ. ಇದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ. ಒಂದು ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮುಖಕ್ಕೆ ಚೆನ್ನಾಗಿ ಹಚ್ಚಿ. ಒಣಗಲು ಬಿಟ್ಟು ಆಮೇಲೆ ತಣ್ಣೀರಿನಲ್ಲಿ ತೊಳೆಯಿರಿ.
3.
ಎರಡು ಚಮಚ ಮೆಂತೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಮೆಂತೆಯನ್ನು ಅರೆದು ಪೇಸ್ಟ್ ಮಾಡಿ. ಚೆನ್ನಾಗಿ ಈ ಪೇಸ್ಟಿನಿಂದ ಮುಖಕ್ಕೆ ಮಸಾಜ್ ಮಾಡಿ ಹಾಗೆಯೇ ಬಿಟ್ಟು ಒಣಗಿದ ಮೇಲೆ ತೊಳೆಯಿರಿ. ಪೇಸ್ಟ್ ಉಳಿದರೆ ಎಸೆಯದೆ ಹಾಗೆಯೇ ಫ್ರಿಜ್ಜಿನಲ್ಲಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ. ಒಂದು ವಾರ ದಿನವೂ ಉಪಯೋಗಿಸುತ್ತಿರಬಹುದು.
4.
ಇಡೀ ತೊಗರಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಿಗ್ಗೆ ತೆಗೆದು ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು.
5.
ಸೌತೆಕಾಯಿಯನ್ನು ತುರಿದು ಅರೆದು ರಸ ತೆಗೆದು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಮುಖ ಫ್ರೆಶ್ ಆಗುತ್ತದೆ. ಅಲ್ಲದೆ ಚರ್ಮವನ್ನೂ ಬಿಗಿಗೊಳಿಸುತ್ತದೆ. ಮುಖದ ಕಲೆಗಳನ್ನೂ ಇದು ತೊಡೆದುಹಾಕುತ್ತದೆ.
ಒಣ ತ್ವಚೆಗೆ
1.
ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ.
2.
ಗಸಗಸೆಯನ್ನು ರಾತ್ರಿಯಿಡೀ ನೆನೆ ಹಾಕಿ ಬೆಳಿಗ್ಗೆ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಗಸಗಸೆಯಲ್ಲಿರುವ ನೈಸರ್ಗಿಕ ತೈಲ ಮುಖಕ್ಕೆ ಬೇಕಾಗಿರುವ ತೈಲಾಂಶ ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
3.
ಹಾಲು ಕುದಿಯುತ್ತಿರುವಾಗಲೇ ಎರಡು ಚಮಚ ತೆಗೆದುಕೊಂಡು ಅದು ತುಸು ಬೆಚ್ಚಗಿರುವಾಗಲೇ ಮುಖಕ್ಕೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಒಣ ತ್ವಚೆಯನ್ನು ತೊಡೆಹಾಕುತ್ತದೆ. ನಿಮ್ಮ ಮುಖದಲ್ಲಿ ಮೊಡವೆಯಿದ್ದರೆ, ಹಾಲಿಗೆ ಸ್ವಲ್ಪ ಉಪ್ಪು ಸೇರಿಸಿ ಮಸಾಜ್ ಮಾಡಬಹುದು.
4.
ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
5.
ಹಾಲಿನ ದಪ್ಪ ಕೆನೆಗೆ ಸ್ವಲ್ಪ ಅರಿಶಿನ ಪುಡಿ ಹಾಗೂ ಆಲಿವ್ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ. ಇದೂ ಕೂಡಾ ಮುಖಕ್ಕೆ ಬೇಕಾದ ಎಣ್ಣೆಯಂಶ ನೀಡಿ ಮುಖವನ್ನು ತಾಜಾ ಆಗಿಸುತ್ತದೆ.
ಮಿಶ್ರ ಚರ್ಮ (ಒಣ ಹಾಗೂ ತೈಲಯುಕ್ತ ಮಿಶ್ರ ಮಾದರಿಯ ಚರ್ಮ)
1.
ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದಿನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ಫ್ರಿಜ್ಜಿನಲ್ಲಿಡಿ. ರಾತ್ರಿ ಕಳೆದು ಬೆಳಗಾದ ಮೇಲೆ ಫ್ರಿಜ್ಜಿನಿಂದ ಹೊರತೆಗೆದು ಇದನ್ನು ಮುಖಕ್ಕೆ ಹಚ್ಚಿ.
2.
ನಿಂಬೆ ಹುಲ್ಲನ್ನು ನೀರಿಗೆ ಹಾಕಿ ಪರಿಮಳ ಹೊರಬರುವವರೆಗೆ ಚೆನ್ನಾಗಿ ಕುದಿಸಿ ಆ ನೀರನ್ನು ಟ್ರೇಯಲ್ಲಿ ಹಾಕಿ ಫ್ರೀಜರಿನಲ್ಲಿಟ್ಟು ಗಟ್ಟಿ ಮಾಡಿ. ಪ್ರತಿ ದಿನ ಕೆಲಸಕ್ಕೆ ಅಥವಾ ಹೊರಗೆ ಹೋಗಿ ಬಂದ ಮೇಲೆ ಮುಖ ತೊಳೆದು ನಿಂಬೆ ಹುಲ್ಲಿನ ನೀರಿನ ಐಸ್ ತುಂಡಿನಿಂದ ಮುಖವನ್ನು ಉಜ್ಜಿ. ಇದು ನಿಮ್ಮ ಚರ್ಮವನ್ನು ತಾಜಾ ಆಗಿಸಿ ಎಲ್ಲಾ ಕೊಳೆಯನ್ನೂ ತೊಡೆದುಹಾಕುತ್ತದೆ.
ಮೊಡವೆಯುಕ್ತ ಚರ್ಮಕ್ಕೆ
1.
ಸ್ವಲ್ಪ ಜಾಯಿಕಾಯಿಯನ್ನು ರೋಸ್ ವಾಟರ್ ಅಥವಾ ನೀರಿನಲ್ಲಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ. ಇದು ಮೊಡವೆ, ಕಪ್ಪು ಕಲೆಗಳನ್ನು ತೆಗೆಯುತ್ತದೆ.
2.
ರಾತ್ರಿ ಮಲಗುವ ಮುನ್ನ ಪ್ರತಿ ದಿನ ಅರ್ಧ ತುಂಡು ಫ್ರೆಶ್ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕುದಿಸಿದ ತಾಜಾ ಒಂದು ಲೋಟ ಹಾಲಿಗೆ ಹಿಂಡಿ ಅರ್ಧ ಗಂಟೆ ಬಿಟ್ಟ ಮೇಲೆ ಅದರಿಂದ ಮುಖ ತೊಳೆದು ಮುಖಕ್ಕೆ ಹಚ್ಚಿದರೆ ಮೊಡವೆ ಪರಿಹಾರ ಕಾಣುತ್ತದೆ.
3.
ಮುಕ್ಕಾಲು ಕಪ್ ಟೊಮ್ಯಾಟೋ ರಸಕ್ಕೆ ಅರ್ಧ ತುಂಡು ನಿಂಬೆಯನ್ನು ಹಿಂಡಿ ಅದಕ್ಕೆ ನಾಲ್ಕೈದು ಪುದಿನ ಸೊಪ್ಪಿನ ಪೇಸ್ಟನ್ನು ಸೇರಿಸಿ. ಬೇಕಿದ್ದರೆ ರುಚಿಗಾಗಿ ಸ್ವಲ್ಪ ಉಪ್ಪನ್ನು ಹಾಕಿ ಒಂದು ವಾರ ಬೆಳಿಗ್ಗೆ ಹಾಗೂ ರಾತ್ರಿ ಕುಡಿದರೆ ಮುಖದ ಚರ್ಮದ ತೊಂದರೆಗಳು ನೀಗುತ್ತದೆ. ಇದು ಚರ್ಮದೊಳಗಿನ ವಿಷಕಾರಕಗಳನ್ನು ತೊಡೆದುಹಾಕಿ ಚರ್ಮವನ್ನು ಒಳಗಿನಿಂದ ಪರಿಶುದ್ಧಗೊಳಿಸುತ್ತದೆ. ಮಲಬದ್ಧತೆ, ಹೊಟ್ಟೆ ಹುಳುಗಳ, ಜಂತುಗಳ ತೊಂದರೆಗೂ ಇದು ಮುಕ್ತಿ ನೀಡುತ್ತದೆ.
4.
ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ತೊಳೆದರೆ ಮುಖಕ್ಕೆ ತಾಜಾ ಹೊಳಪು ಬರುವುದಲ್ಲದೆ, ಚರ್ಮ ಮೃದುವಾಯಿ ನಯವಾಗುತ್ತದೆ.
5.
ಪ್ರತಿ ದಿನ 12ರಿಂದ 14 ಲೋಟ ನೀರು ಕುಡಿಯಿರಿ. ಕರಿದ ತಿಂಡಿಗಳನ್ನು ಬಿಟ್ಟು ತಾಜಾ ಹಸಿ ತರಕಾರಿಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ಕಾಲ ಸುಖ ನಿದ್ದೆ ಮಾಡಿ.
6.
ಆಯಾ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಗೆಯೇ ಹಸಿಯಾಗಿಯೇ ಹೆಚ್ಚು ತಿನ್ನಿ. ಮಾವಿನ ಹಣ್ಣು ಹಾಗೂ ಸ್ಟ್ರಾಬೆರಿಯನ್ನು ಹೆಚ್ಚು ತಿನ್ನಬೇಡಿ. ಇವುಗಳ ಹೆಚ್ಚಿನ ಸೇವನೆಯಿಂದ ಮುಖದಲ್ಲಿ ಮೊಡವೆಗಳೇಳುವ ಸಂಭವವಿದೆ.

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!



ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ಮಾಡಿಯೇ ಇನ್ನಷ್ಟು ಕೂದಲು ಉದುರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ ಎಂಬುದೂ ಸತ್ಯ. ಹೆಚ್ಚಿನ ಪ್ರಮಾಣದಲ್ಲಿ ಟೀ, ಕಾಫಿ, ಆಲ್ಕೋಹಾಲ್, ಮಾಂಸ ಸೇವನೆ, ಸಿಗರೇಟು ಸೇದುವುದು, ಹೆಚ್ಚು ಜಂಕ್ ಫುಡ್ ಆಹಾರ ವ್ಯವಸ್ಥೆಗೇ ಮಾರು ಹೋಗಿರುವುದು ಕೂಡಾ ಕೂದಲುದುರುವಿಕೆಗೆ ಕಾರಣ. ಇದಲ್ಲದೆ ಒತ್ತಡ ಕಡಿಮೆ ಮಾಡಲು ಅನಾವಶ್ಯಕವಾಗಿ ಮಾತ್ರೆ ಸೇವನೆ, ಬಿಪಿ, ಮಾನಸಿಕ ಟೆನ್ಶನ್, ಸುಸ್ತು ಮತ್ತಿತರ ಕಾಯಿಲೆಗಳಿಗಾಗಿ ಹೆಚ್ಚು ಮಾತ್ರೆ ಸೇವಿಸುವುದರಿಂದಲೂ ಕೂದಲು ಉದುರಬಹುದು. ಹಾಗಾದರೆ ಕೂದಲನ್ನು ಹೇಗೆ ಸಂರಕ್ಷಿಸಬಹುದು ಅಥವಾ ಬಕ್ಕ (ಬೋಳು)ತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ ನಿಮ್ಮಲ್ಲೇ ಎದ್ದ ಪ್ರಶ್ನೆಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಪರಿಹಾರ ಉಪಾಯಗಳು ಇಲ್ಲಿವೆ. ಸ್ವೀಕರಿಸುವುದು ನಿಮಗೆ ಬಿಟ್ಟಿದ್ದು.

1. ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.
2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.
3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ
4. ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
5. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.

6. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
7. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
8. ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
9. ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
10. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ.
11. ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಪಿತ್ತ. ಹಾಗಾಗಿ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.
12. ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.
13. ಮಲಬದ್ಧತೆ ಅಥವಾ ಅಜೀರ್ಣ ಆಗದಂತೆ ಯಾವಾಗಲೂ ನೋಡಿಕೊಳ್ಳಬೇಕು. ಮಲಬದ್ಧತೆ ಇದ್ದರೆ ಸುಮ್ಮನೆ ಕೂರದೆ ಯಾವುದಾದರೂ ಮೆದು ಮನೆ ಔಷಧಿಯ ಮೂಲಕ ಸರಿಪಡಿಸಿಕೊಳ್ಳಿ. ಇದಕ್ಕೆ ಆಯುರ್ವೇದದ ತ್ರಿಫಲಾ ಪುಡಿ ಕೂಡಾ ಬಳಸಬಹುದು.
14. ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹೇರಳವಾಗಿರಲಿ. ಸಲಾಡ್, ಹಾಲು, ಹಣ್ಣು, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಪ್ರೋಟೀನ್, ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಿ.
15. ಭೃಂಗರಾಜ ಎಲೆ, ನೆಲ್ಲಿಕಾಯಿ, ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.

16. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ.
17. ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.
18. ಪ್ರತಿದಿನವೂ ತೆಂಗಿನೆಣ್ಣೆ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲ ಕಾಣುತ್ತದೆ.
19. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.
20. ಬೇಯಿಸಿದ ಉದ್ದಿನ ಬೇಳೆಯ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.

21. ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
22. ಯಷ್ಟಿಮಧುವನ್ನು ಹಾಲಿನಲ್ಲಿ ಅರೆದು ಬೋಳಾದ ಭಾಗಕ್ಕೆ ಹಚ್ಚಿದರೆ ಅಲ್ಲಿ ಕೂದಲು ಹುಟ್ಟಲು ಆರಂಭವಾಗುತ್ತದೆ.
23. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.
24. ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
25. ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.
26. ಜೇನಿನೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ತಲೆಬುಡಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ.
27. ಪ್ರತಿ ದಿನವೂ ಮೆಹೆಂದಿ ಎಲೆಯನ್ನು ಎರೆದು ತಲೆಗೆ ಹಚ್ಚುತ್ತಾ ಬಂದಂಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಹಾಗೂ ಹೊಸ ಕೂದಲು ಮೊಳೆಯಲು ಶುರುವಾಗುತ್ತದೆ.
28. ರಾತ್ರಿ ಮಲಗುವ ಮೊದಲು ಹರಳೆಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೂದಲಿಗೆ ಹಚ್ಚಬೇಡಿ. ನಂತರ ತಲೆಯನ್ನು ಬಟ್ಟೆಯಲ್ಲಿ ಸುತ್ತಿ ಮಲಗಿ ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ. ಕನಿಷ್ಟ 15 ದಿನವಾದರೂ ಹೀಗೆ ಮಾಡಿ.
29. ಒಂದು ಚಮಚ ಸಾಸಿವೆಯನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣಿದ ಮೇಲೆ ಇದನ್ನು ಸೋಸಿ, ಕೇವಲ ನೀರನ್ನು ಮಾತ್ರ ಕುಡಿಯಿರಿ.
30. ಎರಡು ಚಮಚಗಳಷ್ಟು ಆಲಿವ್ ಎಣ್ಣೆ, ರೋಸ್‌ಮೆರಿ, ಒಂದು ನಿಂಬೆಹಣ್ಣಿನ ರಸ, ಹಾಗೂ ಒಂದು ಮೊಟ್ಟೆಯ ಹಳದಿ ಲೋಳೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದು ತಲೆಕೂದಲಿಗೆ ಉತ್ತಮ ಟಾನಿಕ್.

31. ಅರ್ಧ ಕಪ್ ಆಲಿವ್ ಎಣ್ಣೆಗೆ ಒಂದು ಚಮಚ ಜೀರಿಗೆ ಪುಡಿಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ.
32. ಅರ್ಧ ಕಪ್ ತೆಂಗಿನ ಎಣ್ಣೆಗೆ ಸ್ವಲ್ಪ ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ತಲೆಯ ಬುಡಕ್ಕೆ ಹಚ್ಚಿ. ಇದು ಕೂದಲುದುರುವುದನ್ನು ತಡೆಯಲು ಸೂಕ್ತ.
33. ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
34. ತೆಂಗಿನ ಕಾಯಿಯ ನೀರನ್ನು ಕುಡಿಯುವುದರಿಂದಲೂ ತಲೆಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

Naa Baredaa Kavitegalu




Sunday 10 April 2011

ಶೇವಿಂಗ್

ಪುರುಷರೇ , ನಿಮಗೆ ಶೇವಿಂಗ್ ಮಾಡೋದು ಗೊತ್ತಾ?
ಶೇವಿಂಗ್ ಗೊತ್ತಾ ಎಂಬ ಈ ಪ್ರಶ್ನೆ ಕೇಳಿದರಂತೂ ಗೊಳ್ಳನೆ ನಕ್ಕಾರು. ಮೀನಿಗೆ ಈಜು ಕಲಿಸಬೇಕೇ ಹೇಳಿ, ಹಾಗೆಯೇ ಪುರುಷರಿಗೂ ಶೇವಿಂಗ್ ಕಲಿಸಬೇಕಾಗಿಲ್ಲ ಬಿಡಿ ಎಂದು ಉಡಾಫೆ ಮಾಡಿಬಿಡಬಹುದು. ಆದರೆ ಇಲ್ಲಿ ಹೀಗೆ ಪ್ರಶ್ನೆ ಕೇಳಲೂ ಕೂಡಾ ಕಾರಣವಿದೆ.
ಬ್ಯೂಟಿ ಅರ್ಥಾತ್ ಸೌಂದರ್ಯ ಅನ್ನೋದು ಕೇವಲ ಸ್ತ್ರೀಯರ ಸೊತ್ತಲ್ಲ ಎಂಬುದು ಖಂಡಿತಾ ನಿಜ. ಪುರುಷರ ಸೌಂದರ್ಯಕ್ಕೂ ಅಷ್ಟೇ ಮಹತ್ವವಿದೆ. ಆದರೆ, ಸ್ತ್ರೀ ಹಾಗೂ ಸೌಂದರ್ಯ ಎರಡೂ ಶಬ್ದಗಳು ಒಂದಕ್ಕೊಂದು ಬೆಸೆದ ಸಮಾನಾರ್ಥಕ ಶಬ್ದಗಳೋ ಎಂಬಂತೆ ಮೇಳೈಸಿವೆ. ಹಾಗಾಗಿಯೋ ಏನೋ, ಬ್ಯೂಟಿ ಕಾಲಂಗಳು, ಜಾಹಿರಾತುಗಳು, ಲೇಖನಗಳು ಯಾವಾಗಲೂ ಸ್ತ್ರೀಯ ಜಗತ್ತಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಅದಕ್ಕಾಗಿ ಈ ಬಾರಿ ಈ ಕಾಲಂನಲ್ಲಿ ಪುರುಷರಿಗಾಗಿಯೇ ಸೌಂದರ್ಯ ಸಲಹೆಗಳು!
ಶೇವಿಂಗ್! ಇದು ಪುರುಷರ ದೊಡ್ಡ ಸಮಸ್ಯೆ. ಇದೇನು ಮಹಾ ಸಮಸ್ಯೆ ಎಂದು ನೀವು ಹೇಳಬಹುದು. ಆದರೆ ಶೇವ್ ಮಾಡುವುದಕ್ಕೂ ಒಂದು ಕ್ರಮವಿದೆ, ವಿಧಾನವಿದೆ. ಹಾಗೆ ನೋಡಿದರೆ ನೂರರಲ್ಲಿ ಶೇ.70ರಷ್ಟು ಪುರುಷರಿಗೆ ನಿಜವಾಗಿ ಶೇವ್ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ಮೀಸೆ, ಗಡ್ಡ ಮೂಡುವ ಹದಿಹರೆಯದಲ್ಲಂತೂ ಇದನ್ನು ಹೇಗೆ ಶೇವ್ ಮಾಡಲಿ ಎಂದೇ ಎಷ್ಟೋ ಹುಡುಗರು ಮುಜುಗರದಿಂದ ಪರದಾಡುತ್ತಿರುತ್ತಾರೆ  ಹೇಗ್ಹೇಗೋ ಗಡ್ಡ ಮೀಸೆಯನ್ನು ಬ್ಲೇಡಿನಲ್ಲಿ ತೆಗೆದು ಬಿಟ್ಟರೆ, ಕೂದಲು ಮತ್ತೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಹಲವರಿಗೆ ಶೇವ್ ಮಾಡಿದಲ್ಲಿ ಕೆಂಪು ಗುಳ್ಳೆಗಳೇಳಬಹುದು. ಬೆವರು ಸಾಲೆಯ ಮಾದರಿಯಲ್ಲಿ ಸಣ್ಣ ಕಜ್ಜಿಗಳು ಮೂಡಬಹುದು. ಇದು ಕೇವಲ ಗಡ್ಡ ಅಥವಾ ಮೀಸೆ ತೆಗೆದ ಜಾಗ ಮಾತ್ರವಲ್ಲ, ದೇಹದ ಇತರ ಕಡೆಗಳಲ್ಲಿಯೂ ಕಜ್ಜಿ ಮೂಡಲು ನಿಮ್ಮ ಶೇವಿಂಗ್ ಕ್ರಮ ಸರಿಯಾಗಿಲ್ಲದಿರುವುದೂ ಕಾರಣವಾಗಿರಬಹುದು ಎಂಬುದು ನಿಮಗೆ ಗೊತ್ತೇ?
ಹೌದು. ಅದಕ್ಕಾಗಿಯೇ ಕೆಲವೊಂದು ಸುಲಭವಾಗಿ ಅನುಸರಿಸಬಲ್ಲ ಶೇವಿಂಗ್ ಟಿಪ್ಸ್ ಇಲ್ಲಿದೆ.
ಶೇವ್ ಮಾಡುವ ಮೊದಲು:
ಮುಖವನ್ನು ಒದ್ದೆ ಮಾಡದೆ ಹಾಗೆಯೇ ಶೇವ್ ಮಾಡಿದರೆ ರೇಜರ್‌ನಿಂದ ನಿಮ್ಮ ಕೆನ್ನೆಯಲ್ಲಿ ಕೆಂಪು ಗುಳ್ಳೆಗಳು ಹಾಗೂ ಗೆರೆಗಳು ಮೂಡುತ್ತವೆ. ಹಾಗಾಗಿ ಶೇವ್ ಮಾಡುವ ಮೊದಲು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಬಿಸಿ ನೀರಿನಿಂದ ಮೊದಲು ಒದ್ದೆ ಮಾಡುವುದರಿಂದ ಮುಖದ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತದೆ. ಮೀಸೆ ಹಾಗೂ ಗಡ್ಡದ ಕೂದಲುಗಳು ಮೆತ್ತಗಾಗುತ್ತದೆ. ಹಾಗಾಗಿ ಶೇವ್ ಮಾಡಲು ಸುಲಭವಾಗುತ್ತದೆ. ಶೇವ್ ಮಾಡುವುದಕ್ಕಿಂತ ಕೊಂಚ ಮೊದಲು ಮಾಯ್‌ಶ್ಛರೈಸರನ್ನು ಶೇವ್ ಮಾಡಬೇಕಾದ ಜಾಗದಲ್ಲಿ ನಯವಾಗಿ ಹಚ್ಚುವುದೂ ಕೂಡಾ ಒಳ್ಳೆಯು. ಚಳಿಗಾಲದಲ್ಲಿ ಚರ್ಮ ಪೊರೆಗಳಂತೆ, ಹೊಟ್ಟು ಎದ್ದಂತೆ ಇರುವುದರಿಂದ ಹಾಗೂ ತುಂಬ ಒಣ ಇರುವುದರಿಂದ ಇಂಥ ಸಂದರ್ಭ ಶೇವ್ ಮಾಡುವಾಗ ಗಾಯಗಳಾಗುವುಗು ರಕ್ತ ಸೋರುವುದು ಆಗಬಹುದು. ಮಾಯ್‌ಶ್ಚರೈಸರ್ ಹಚ್ಚಿದರೆ ಗಾಯಗಳಾಗುವ ಸಾಧ್ಯತೆ ತುಂಬಾ ಕಡಿಮೆ.
-
ಶೇವ್ ಮಾಡುವ ಮೊದಲು ಮೆದುವಾದ ಶೇವಿಂಗ್ ಕ್ರೀಂ ಹಚ್ಚಿ. ಇದು ನಿಮ್ಮ ಶೇವಿಂಗನ್ನು ಸುಲಭವಾಗಿಸುತ್ತದೆ. ಶೇವಿಂಗ್ ಕ್ರೀಂ ಸಿಕ್ಕಸಿಕ್ಕವನ್ನೆಲ್ಲಾ ಆಯ್ದುಕೊಳ್ಳಬೇಡಿ. ಆಲ್ವಿರಾ ಇರುವಂಥ ಕ್ರೀಂ ಆಯ್ದುಕೊಳ್ಳಿ. ಇದು ಚರ್ಮಕ್ಕೆ ಹಿತವಾದ ಅನುಭವ ನೀಡುತ್ತದೆ.
-
ಶೇವಿಂಗ್ ಕ್ರೀಂ ಹಚ್ಚಿ ಲಗುಬಗೆಯಿಂದ ಶೇವ್ ಮಾಡಿ ಮುಗಿಸಬೇಡಿ. ಕ್ರೀಂ ಹಚ್ಚಿ ಕೆಲಕಾಲ ಮೆದುವಾಗಿ ಮಸಾಜ್ ಮಾಡಿ.
-
ತುಂಬಾ ನೊರೆ ಬರುವಂಥ ಜೆಲ್, ಕ್ರೀಂಗಳನ್ನು ಶೇವಿಂಗ್‌ಗಾಗಿ ಬಳಸಬೇಡಿ. ಮುಖ್ಯವಾಗಿ ಬೆನ್‌ಝೋಕೈನ್ ಅಥವಾ ಮೆಂಥಾಲ್ ಇರುವಂಥ ಕ್ರೀಂಗಳನ್ನು ಬಳಸಬೇಡಿ. ಇವು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಹಾಕುವುದಲ್ಲದೆ, ಚರ್ಮವನ್ನು ಒಣವಾಗಿಸುತ್ತದೆ.

ಶೇವ್ ಮಾಡುವ ಟಿಪ್ಸ್:

ಶೇವ್ ಮಾಡಿದ ನಂತರ:

-
ಶೇವ್ ಮಾಡಿದ ಮೇಲೆ ತುಂಪು ನೀರಿನಲ್ಲಿ ಮುಖ ಸ್ವಚ್ಛಗೊಳಿಸಿ.
-
ನಂತರ ಶೇವ್ ಮಾಡಿದ ಜಾಗಕ್ಕೆ ಸ್ಕಿನ್ ಟೋನರ್ ಹಚ್ಚಿ. ಇದು ನಿಮ್ಮ ಚರ್ಮ ರಂಧ್ರಗಳನ್ನು ಮುಚ್ಚಿಸಿ ಸುಸ್ಥಿತಿಯಲ್ಲಿಡುತ್ತದೆ. ತಾಜಾ ಆಗಿಸುತ್ತದೆ.
-
ನಂತರ ಮಾಯ್‌ಶ್ಚರೈಸಿಂಗ್ ಆಫ್ಟರ್ ಶೇವ್ ಕ್ರೀಮನ್ನು ಶೇವ್ ಮಾಡಿದ ಜಾಗಕ್ಕೆ ಹಚ್ಚಿ ಮೆತ್ತಗೆ ಮಸಾಜ್ ಮಾಡಿ. ಆಲ್ಕೋಹಾಲ್ ಕಂಟೆಂಟ್ ಇರುವ ಆಫ್ಟರ್ ಶೇವ್ ಕ್ರೀಮ್ ಒಳ್ಳೆಯದಲ್ಲ.
-
ಆಫ್ಟರ್ ಶೇವ್ ಕ್ರೀಂ ಹಚ್ಚುವ ಬದಲು ಮಾಯ್‌ಶ್ಚರೈಸರ್ ಕೂಡಾ ಬಳಸಬಹುದು.








-
ನಿಮ್ಮ ರೇಝರ್ ಹರಿತವಾಗಿದೆಯೇ ಎಂದು ಪರೀಕ್ಷಿಸಿ. ಹಳೆಯ ಬಾಗಿದ ಬ್ಲೇಡ್‌ಗಳನ್ನು ಬಳಸಬೇಡಿ.
-
ಅತ್ಯುತ್ತಮ ಕ್ಲೀನ್ ಶೇವ್‌ಗಾಗಿ ರೇಝರ್ ಆಯ್ಯೆಯೂ ಬಹುಮುಖ್ಯ. ಹಿಡಿ ಭಾರವಾಗಿರುವಂಥ ರೇಝರನ್ನು ಆಯ್ಕೆ ಮಾಡಿಕೊಳ್ಳಿ.
-
ಯಾವಾಗಲೂ ಮೊದಲು ಯಾವ ದಿಕ್ಕಿನಿಂದ ಕೂದಲು ಹುಟ್ಟಿದೆಯೋ ಅದೇ ದಿಕ್ಕಿನಿಂದ ಶೇವಿಂಗ್ ಮಾಡಿ. ಹೀಗೆ ಮಾಡಿದ ನಂತರ ಮತ್ತೆ ಸ್ವಲ್ಪ ಕ್ರೀಂ ಹಚ್ಚಿ ವಿರುದ್ಧ ದಿಕ್ಕಿನಿಂದ ಶೇವ್ ಮಾಡಿ. ಆಗ ಕ್ಲೀನ್ ಶೇವ್ ನಿಮ್ಮದಾಗುತ್ತದೆ.
-
ರೇಝರ್ ಮೇಲೆ ತುಂಬಾ ಒತ್ತಡ ಹಾಕಿ ಶೇವ್ ಮಾಡಬೇಡಿ. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು.
-
ಆಗಾಗ ನಿಮ್ಮ ರೇಝರನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ.

ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!

ಇವು ಸೌಂದರ್ಯದ ಗಣಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!



ಐಶ್ವರ್ಯಾ ರೈ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುದು ಜಗಜ್ಜಾಹೀರು. ವಯಸ್ಸು 35 ದಾಟಿದರೂ ಇಂದಿಗೂ ತನ್ನ ರೂಪ ಪ್ರತಿಭೆಯಿಂದಾಗಿ ಮುಂಚೂಣಿಯಲ್ಲಿರುವ ನಟಿ. ವಿಶ್ವಸುಂದರಿಯಾಗಿ ಬದುಕನ್ನು ತಾನು ಬಯಸಿದ ಹಾಗೆ ಕಟ್ಟಿಕೊಂಡ ಜಾಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪ್ರಚುರ ಪಡಿಸಿದ ಬೆಡಗಿ. ಐಶ್ ಮಾದಕವಾಗಿಯೂ ಕಾಣಬಲ್ಲ ಚತುರೆ. ಅಪ್ಪಟ ಭಾರತೀಯ ನಾರಿಯಾಗಿಯೂ ಕಂಗೊಳಿಸಬಲ್ಲ ಮಂಗಳೂರಿನ ಚೆಲುವೆ. ಈ ತುಳುನಾಡ ಬೆಡಗಿ ತನ್ನ ಜೀವನದ ಒಂದೊಂದೇ ಮೆಟ್ಟಿಲನ್ನೂ ಏರಿ ಬೆಳೆದದ್ದೇ ಒಂದು ಯಶೋಗಾಥೆ. ಸೊಸೆಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ವೃತ್ತಿ ಬದುಕಿನಲ್ಲೂ ಅಷ್ಟೇ ಮಟ್ಟಿನ ಸ್ಪಷ್ಟತೆಯನ್ನು, ಯಶಸ್ಸನ್ನೂ ಕಾಯ್ದುಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ಈ ಐಶ್ ಅವೆಲ್ಲವೂಗಳನ್ನೂ ಸಮರ್ಥವಾಗಿ ನಿಭಾಯಿಸಿದವಳು. ಈ ಐಶ್ವರ್ಯಾ ಎಂಬ ಸೌಂದರ್ಯದ ಖನಿಯ ಬ್ಯೂಟಿ ಸೀಕ್ರೆಟ್ ನಿಮಗೆ ಗೊತ್ತೇನು? ತುಂಬಾ ಸಿಂಪಲ್. ಆಕೆಯೇ ಹೇಳಿಕೊಂಡಂತೆ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಅನುಸರಿಸುವ ದಿನನಿತ್ಯದ ಅಭ್ಯಾಸಗಳು ಇಲ್ಲಿವೆ.
ಪಕ್ಕಾ ನ್ಯಾಚುರಲ್ ವಸ್ತುಗಳ ಬಳಕೆ ಐಶ್ವರ್ಯಾದು. ಕೆಮಿಕಲ್ ಬ್ಯೂಟಿ ಪ್ರಾಡಕ್ಟ್‌ಗಳಿಗಿಂತಲೂ ನ್ಯಾಚುರಲ್ ಬ್ಯೂಟಿ ಪ್ರಾಡೆಕ್ಟ್‌ಗಳೆಡೆಗೆ ಹೆಚ್ಚು ಮಹತ್ವ. ರಾಸಾಯನಿಕ ಸೌಂದರ್ಯವರ್ಧಕಗಳಿಂದ ಮಾರು ದೂರ. ಕಳಾಹೀನವಾದ ಕೂದಲಿಗೆ ದಿನವೂ ಪ್ರಾಕೃತಿಕವಾಗಿಯೇ ಪೋಷಣೆ ನೀಡುವ ಐಶ್ ಭಾರತದ ಪುರಾತನ ಸೌಂದರ್ಯ ವರ್ಧನೆಯ ಟಿಪ್ಸ್‌ಗಳನ್ನು ಪಾಲಿಸುತ್ತಾ ಬಂದವರು.
ಶೂಟಿಂಗ್ ಮುಗಿಸಿ ಮನೆಗೆ ಬಂದ ಮೇಲೆ, ಚರ್ಮವನ್ನು ಪ್ರತಿದಿನವೂ ಮೃದುವಾಗಿ ತಿಳಿಯಾಗಿಸಲು ಸೌತೆಕಾಯಿ ಬಳಕೆ. ಪ್ರತಿದಿನವೂ ಶೂಟಿಂಗ್ ಮುಗಿಸಿದ ಮೇಲೆ ಕ್ಲೀನಾಗಿ ಮುಖ ತೊಳೆದು, ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಮುಖಕ್ಕೆ ವರ್ತುಲವಾಗಿ ಉಜ್ಜುವುದು.
ಕಡಲೇ ಹಿಟ್ಟಿನ ಪೇಸ್ಟಿನಿಂದ ಚರ್ಮ ಶುದ್ಧಿಗೊಳಿಸುವುದು. ನಂತರ ಹಾಲು ಹಾಗೂ ಮೊಸರಿನ ಪ್ಯಾಕ್ ಲೇಪಿಸಿ ಚರ್ಮವನ್ನು ಮಾಯ್ಸ್‌ಶ್ಚರೈಸ್ ಮಾಡುವುದು.
ಆಗಾಗ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವುದು. ಭಾರತದಲ್ಲಿ ಬಹು ಪ್ರಸಿದ್ಧವಾದ ಕಡಲೇಹಿಟ್ಟಿನ ಫೇಸ್ ಪ್ಯಾಕ್ ಐಶ್‌ರ ದಿನನಿತ್ಯದ ಹವ್ಯಾಸ. ಸ್ವಲ್ಪ ಕಡಲೇಹಿಟ್ಟಿಗೆ ಸ್ವಲ್ಪ ಅರಿಶಿನ ಸೇರಿಸಿ ಅದಕ್ಕೆ ಮೊಸರು ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು. ಅಥವಾ, ಶ್ರೀಗಂಧ, ಮುಲ್ತಾನಿ ಮಿಟ್ಟಿ, ಅರಿಶಿನ ಪುಡಿ ಮಿಕ್ಸ್ ಮಾಡಿ ಅದಕ್ಕೆ ಕೊಂಚ ಮೊಸರು ಹಾಗೂ ಹಾಲು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು.
ಮನೆಯಲ್ಲಿರುವಷ್ಟೂ ಹೊತ್ತು ಮೇಕಪ್ ರಹಿತಾಗಿದ್ದು, ಚರ್ಮವನ್ನು ಉಸಿರಾಡಲು ಬಿಡುವುದು.
ಕಠಿಣ ಆಹಾರ ಕ್ರಮ ಪಾಲಿಸುವುದು ಕೂಡಾ ಆಕೆಯ ದಿನಚರಿ. ಕರಿದ, ಎಣ್ಣೆ ಹೆಚ್ಚಿರುವ ತಿನಸುಗಳು, ಜಂಕ್ ಫುಡ್‌ಗಳಿಂದ ಐಶ್ ಸದಾ ದೂರ, ಬಹುದೂರ!
ಧೂಮಪಾನ, ಮದ್ಯಪಾನಗಳಿಂದಲೂ ಸದಾ ದೂರವಿರುವುದು.
ಯಾವತ್ತೂ ಹೊಟ್ಟೆ ತುಂಬಿ ತುಳುಕುವಷ್ಟು ತಿನ್ನುವುದರಿಂದ ದೂರವಿರುವುದು ಹಾಗೂ ಹಿತವಾಗಿ ಮಿತವಾಗಿ ಉಣ್ಣುವುದು.
ಪ್ರತಿದಿನವೂ 8 ಲೋಟಗಳಿಗಿಂತಲೂ ಹೆಚ್ಚು ನೀರು ಕುಡಿಯುವ ಮೂಲಕ ಮುಖದ ಚರ್ಮವನ್ನು ಸದಾ ತಿಳಿಯಾಗಿಸಿಕೊಳ್ಳುವುದು. ಬೆಳಿಗ್ಗೆ ಎದ್ದ ತಕ್ಷಣ ಎರಡು ಮೂರು ಲೋಟ ನೀರು ಕುಡಿಯುವುದು.
ಕೆಲಸ ಎಷ್ಟೇ ಕಠಿಣವಿರಲಿ, ಎಷ್ಟೇ ಸುಸ್ತಾಗಲಿ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವ ಕಾರ್ಯಕ್ಕೆ ಅದರದ್ದೇ ಆದ ಪ್ರಾಧಾನ್ಯತೆ ನೀಡುವುದು ಐಶ್ ದಿನಚರಿ.
ಸದಾ ತನಗೊಪ್ಪುವ ಬಣ್ಣ ಹಾಗೂ ಡಿಸೈನ್‌ನ ಬಟ್ಟೆಗಳನ್ನು ಧರಿಸುವ ಮೂಲಕ ಇನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳುವುದು.
ಕೊಂಚ ಯೋಗ, ಧ್ಯಾನ, ದೇವರೆಡೆಗೆ ಭಕ್ತಿ ಇವೆಲ್ಲವೂ ಐಶ್ ದಿನಚರಿ. ಪ್ರತಿದಿನವೂ ನಗುಮೊಗದಿಂದಲೇ ದಿನದಾರಂಭ. ಪಾಸಿಟಿವ್ ಥಿಂಕಿಂಗ್, ಮುಖದಲ್ಲಿ ನಗು ಇವೆಲ್ಲವೂ ನಿಜವಾದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುದರಲ್ಲಿ ಐಶ್ವರ್ಯಾಗೆ ಅಚಲವಾದ ನಂಬಿಕೆಯಂತೆ.